ಮಾತಲ್ಲಿ ಸಭ್ಯತೆ ಇರಲಿ: ಬಿಜೆಪಿ ಸಂಸದನಿಗೆ ಸ್ಮೃತಿ ಇರಾನಿ ಪಾಠ!

ಹೊಸದಿಲ್ಲಿ, ಜು.25: ನಿಮ್ಮ ಆತಂಕ ವ್ಯಕ್ತಪಡಿಸುವಾಗ ಶಬ್ದಗಳ ಆಯ್ಕೆಯಲ್ಲಿ ಎಚ್ಚರ ಇರಲಿ; ಸಭ್ಯತೆಯ ಎಲ್ಲೆ ಮೀರದಿರಲಿ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಸಂಸತ್ತಿನಲ್ಲಿ ಬುಧವಾರ ಬಿಜೆಪಿ ಸಂಸದರೊಬ್ಬರಿಗೆ ನಯವಾಗಿ ಗದರಿದ ಸ್ವಾರಸ್ಯಕರ ಪ್ರಸಂಗ ನಡೆಯಿತು.
ಮಕ್ಕಳ ವಿರುದ್ಧದ ಲೈಂಗಿಕ ಅಪರಾಧ ಕುರಿತ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿಯ ಹಿರಿಯ ರಾಜ್ಯಸಭಾ ಸದಸ್ಯ ಹರನಾಥ್ ಸಿಂಗ್ ಯಾದವ್, ಲೈಂಗಿಕ ಅಪರಾಧ ಹೆಚ್ಚಳಕ್ಕೆ ಟಿವಿ ಹಾಗೂ ಸಾಮಾಜಿಕ ಜಾಲತಾಣಗಳು ಕಾರಣ ಎಂದು ಆಪಾದಿಸಿದರು. "ಇಲ್ಲಿ ಪ್ರಶ್ನೆ ಎಂದರೆ ಈ ಲೈಂಗಿಕ ಅಪರಾಧಿಗಳು ಎಲ್ಲಿಂದ ಬರುತ್ತಾರೆ ಎನ್ನುವುದು. ವಾಸ್ತವ ಎಂದರೆ ನಾವು ಏನು ನೀಡುತ್ತೇವೆಯೋ ಅದನ್ನೇ ಪಡೆಯುತ್ತೇವೆ" ಎಂದು ವಿಶ್ಲೇಷಿಸಿದರು.
"ನನ್ನನ್ನು ಭೇಟಿ ಮಾಡಿದ ಸ್ನೇಹಿತನೊಬ್ಬ ಪೋರ್ನ್ (ಅಶ್ಲೀಲತೆ) ಬಗ್ಗೆ ಮಾತನಾಡಲು ಆರಂಭಿಸಿದ. ಆದರೆ ನನಗೆ ಪಾಪ್ಕಾರ್ನ್ ಗೊತ್ತೇ ವಿನಃ ಪೋರ್ನ್ ಗೊತ್ತಿರಲಿಲ್ಲ" ಎಂದು ಮಾತಿನ ಲಹರಿ ಸಾಗಿತ್ತು. ಮಕ್ಕಳು ಬೆಳಗ್ಗಿನಿಂದ ರಾತ್ರಿಯವರೆಗೂ ಆಕ್ಷೇಪಾರ್ಹ ಅಂಶಗಳನ್ನೇ ನೋಡುತ್ತಾರೆ ಎಂದು ಯಾದವ್ ವಿವರಿಸಿದರು. ಆಗ ಮಧ್ಯಪ್ರವೇಶಿಸಿದ ಇರಾನಿ, "ನಿಮ್ಮ ಆತಂಕ ವ್ಯಕ್ತಪಡಿಸುವಾಗ ಸಭ್ಯತೆ ಎಲ್ಲೆ ಮೀರದಿರಲಿ" ಎಂದು ನಯವಾಗಿ ಗದರಿದರು.
"ಯಾದವ್ ನನಗಿಂತ ಹಿರಿಯರು; ಆದರೆ ಇಲ್ಲಿ ಬಹಳಷ್ಟು ಮಂದಿ ಮಹಿಳೆಯರು ಕುಳಿತಿದ್ದಾರೆ. ಚರ್ಚೆಯನ್ನು ಇಡೀ ದೇಶ ವೀಕ್ಷಿಸುತ್ತಿದೆ. ನಿಮ್ಮ ಆತಂಕ ವ್ಯಕ್ತಪಡಿಸುವ ವೇಳೆ ಸಭ್ಯತೆ ಇರಲಿ" ಎಂದು ಇರಾನಿ ಹೇಳಿದರು.