ಕಳಿಯೂರಿನಿಂದ ಅಪಹರಣಕ್ಕೀಡಾಗಿದ್ದ ಕಾಲೇಜು ವಿದ್ಯಾರ್ಥಿ ಪತ್ತೆ
ಮಂಗಳೂರು ಬಸ್ ನಿಲ್ದಾಣದಲ್ಲಿ ಬಾಲಕನನ್ನು ತೊರೆದು ಹೋಗಿರುವ ಅಪಹರಣಕಾರರು

ಕಾಸರಗೋಡು, ಜು.25: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿಯ ಕಳಿಯೂರಿನಿಂದ ಅಪಹರಣಕ್ಕೀಡಾಗಿದ್ದ ಕಾಲೇಜು ವಿದ್ಯಾರ್ಥಿ ಹಸನ್ ಕುಂಞಿ ಎಂಬವರ ಪುತ್ರ ಹಾರಿಸ್(17) ಇಂದು ಬೆಳಗ್ಗೆ ಮಂಗಳೂರಿನಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಅಪಹರಣಕಾರರು ಹಾರಿಸ್ ನನ್ನು ಮಂಗಳೂರಿನ ಬಸ್ ನಿಲ್ದಾಣದಲ್ಲಿ ತೊರೆದು ಹೋಗಿದ್ದಾರೆನ್ನಲಾಗಿದೆ. ಬಳಿಕ ಹಾರಿಸ್ ನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ಪಡೆದು ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಆನಂತರ ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಆತನನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ತೊಕ್ಕೊಟ್ಟಿನ ಖಾಸಗಿ ಕಾಲೇಜೊಂದರ ಪಿಯು ವಿದ್ಯಾರ್ಥಿಯಾಗಿರುವ ಹಾರಿಸ್ನನ್ನು ಜು.22ರಂದು ತಂಡವೊಂದು ಅಪಹರಿಸಿತ್ತು. ಅಂದು ಬೆಳಗ್ಗೆ 7:30ರ ಸುಮಾರಿಗೆ ತನ್ನ ಸಹೋದರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ತೆರಳುತ್ತಿದ್ದ ಹಾರಿಸ್ನನ್ನು ಕಾರೊಂದರಲ್ಲಿ ಬಂದ ತಂಡ ಕೊಳಿಯೂರು ಪದವಿನಲ್ಲಿರುವ ಆಡಿಟೋರಿಯಂ ಬಳಿ ಅಡ್ಡಗಟ್ಟಿ ಆತನನ್ನು ಅಪಹರಿಸಿತ್ತು. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ ಮಂಜೇಶ್ವರ ಠಾಣೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದರು. ಪ್ರಕರಣದ ತನಿಖೆಯನ್ನು ಮಂಜೇಶ್ವರ ಸಿ.ಐ. ದಿನೇಶನ್ ನೇತೃತ್ವದ ಪೊಲೀಸರು ಕೈಗೆತ್ತಿಕೊಂಡಿದ್ದರು. ಇದೀಗ ವಿದ್ಯಾರ್ಥಿ ಪತ್ತೆಯಾಗಿದ್ದು, ಪ್ರಕರಣದ ಹಿಂದಿನ ರಹಸ್ಯ ಇನ್ನಷ್ಟೇ ತಿಳಿದುಬರಬೇಕಿದೆ.







