ಬಹುಕೋಟಿ ವಂಚನೆ ಪ್ರಕರಣ: ಜು.26ರಂದು ಎಸ್ಐಟಿ ವಶಕ್ಕೆ ಮನ್ಸೂರ್ ಖಾನ್

ಬೆಂಗಳೂರು, ಜು.25: ಈಡಿ(ಜಾರಿ ನಿರ್ದೇಶನಾಲಯ) ವಶದಲ್ಲಿರುವ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಐಎಂಎ ಸಮೂಹ ಸಂಸ್ಥೆಯ ಮಾಲಕ ಮನ್ಸೂರ್ ಅಹ್ಮದ್ ಖಾನ್ನನ್ನು ನಾಳೆ(ಜು.26) ವಿಶೇಷ ತನಿಖಾ ತಂಡದ(ಎಸ್ಐಟಿ) ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ಕಳೆದ 6ದಿನಗಳಿಂದ ಜಾರಿ ನಿರ್ದೇಶನಾಲಯದ(ಈಡಿ) ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಮನ್ಸೂರ್ ಅಹ್ಮದ್ ಖಾನ್, ತಾನು ಐಎಂಎ ಸಮೂಹ ಸಂಸ್ಥೆಗಳ ಮೂಲಕ ನಡೆಸಿರುವ ವಂಚನೆ ಪ್ರಕರಣಗಳ ಕುರಿತು ಕುತೂಹಲಕಾರಿ ಅಂಶಗಳನ್ನು ಬಹಿರಂಗ ಪಡಿಸಿದ್ದಾನೆ. ಹಾಗೂ ಪ್ರಕರಣದಲ್ಲಿ ಸರಕಾರದ ಅಧಿಕಾರಿಗಳು-ಜನಪ್ರತಿನಿಧಿಗಳು ಭಾಗಿಗಳಾಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಮಾಜಿ ಸಚಿವರಾದ ರೋಷನ್ ಬೇಗ್ ಹಾಗೂ ಝಮೀರ್ ಅಹ್ಮದ್ ಖಾನ್ ಅವರೊಂದಿಗೆ ಹಣಕಾಸಿನ ವ್ಯವಹಾರ ಹೊಂದಿರುವುದರ ಬಗ್ಗೆ ಮಾಹಿತಿ ನೀಡಿದ್ದು, ಈ ಸಂಬಂಧ ಕೆಲವು ದಾಖಲಾತಿಗಳನ್ನು ಈಡಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಐಎಂಎ ಸಂಸ್ಥೆಯ ಸಂಪೂರ್ಣ ಹಣಕಾಸಿನ ವ್ಯವಹಾರವನ್ನು ಅಂಕಿ-ಸಂಖ್ಯೆಗಳ ಸಮೇತ ಕಲೆ ಹಾಕಲಾಗಿದೆ.
ಈಗಾಗಲೇ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿವರಗಳನ್ನು ಮುಂದಿಟ್ಟುಕೊಂಡು ಮನ್ಸೂರ್ ಅಹ್ಮದ್ ಖಾನ್ನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಸ್ಐಟಿ ತನಿಖಾಧಿಕಾರಿ ಗಿರೀಶ್ ತಿಳಿಸಿದ್ದಾರೆ.







