ಅತೃಪ್ತ ಶಾಸಕರ ಮನವೊಲಿಕೆ ಮುಗಿದ ಅಧ್ಯಾಯ: ಸತೀಶ್ ಜಾರಕಿಹೊಳಿ
![ಅತೃಪ್ತ ಶಾಸಕರ ಮನವೊಲಿಕೆ ಮುಗಿದ ಅಧ್ಯಾಯ: ಸತೀಶ್ ಜಾರಕಿಹೊಳಿ ಅತೃಪ್ತ ಶಾಸಕರ ಮನವೊಲಿಕೆ ಮುಗಿದ ಅಧ್ಯಾಯ: ಸತೀಶ್ ಜಾರಕಿಹೊಳಿ](https://www.varthabharati.in/sites/default/files/images/articles/2019/07/25/202181-1564066075.jpg)
ಬೆಂಗಳೂರು, ಜು.25: ಅತೃಪ್ತ ಶಾಸಕರನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಮನವೊಲಿಸುವುದಿಲ್ಲ. ಆ ವಿಷಯ ಮುಗಿದ ಅಧ್ಯಾಯ ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗುರುವಾರ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಅತೃಪ್ತರನ್ನು ಮತ್ತೆ ಪಕ್ಷಕ್ಕೆ ಬರಮಾಡಿಕೊಳ್ಳುವ ಪ್ರಶ್ನಯೇ ಇಲ್ಲ. ಒಂದು ವೇಳೆ ಚುನಾವಣೆ ನಡೆದರೆ, ಆ ಕ್ಷೇತ್ರಗಳಲ್ಲಿ ಹೊಸಬರನ್ನು ಆಯ್ಕೆ ಮಾಡಿ ಟಿಕೆಟ್ ಕೊಡಲಾಗುತ್ತದೆ ಎಂದರು.
ಚುನಾವಣೆಯಲ್ಲಿ ಅತೃಪ್ತ ಶಾಸಕರ ವಿರುದ್ಧ ಯಾವ ರೀತಿಯಲ್ಲಿ ಹೋರಾಟ ಮಾಡಬೇಕು ಎಂಬುದರ ಕುರಿತು ಉಭಯ ಪಕ್ಷಗಳ ಮುಖಂಡರು ತೀರ್ಮಾನ ಮಾಡುವ ಸಾಧ್ಯತೆಯಿದೆ. ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೆ, ಅಥವಾ ಬೇಡವೇ ಎಂಬ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ ಎಂದು ಅವರು ಹೇಳಿದರು.
ಮುಂಬೈನಲ್ಲಿ ಕುಳಿತಿರುವ ಅತೃಪ್ತರು ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳಿಕೊಂಡರೆ ಏನು ಪ್ರಯೋಜನ. ಸಮಸ್ಯೆಗಳಿದ್ದರೆ ನಾಯಕರ ಬಳಿ ಬಂದು ಮುಕ್ತವಾಗಿ ಮಾತನಾಡಿ, ಅವುಗಳನ್ನು ಬಗೆಹರಿಸಿಕೊಳ್ಳಬೇಕಿತ್ತು. ಈ ರೀತಿ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೋಗಿದ್ದು ಸರಿಯಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಬಿಜೆಪಿ ಮುಂದೆ ಸಾಕಷ್ಟು ಸವಾಲುಗಳಿವೆ. ಬಿಜೆಪಿಗೆ ಸರಕಾರ ರಚಿಸುವಷ್ಟು ಬಹುಮತವಿಲ್ಲ. ಬೇರೆ ಪಕ್ಷದ ಶಾಸಕರನ್ನು ತಮ್ಮ ಜೊತೆಯಲ್ಲಿಟ್ಟುಕೊಂಡು ಸರಕಾರ ರಚಿಸುವುದು ಕಷ್ಟ ಎಂದು ಅವರು ಎಚ್ಚರಿಕೆ ನೀಡಿದರು.