ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್, ಇತರರ ವಿರುದ್ಧ ಪ್ರಕರಣ ದಾಖಲು

ಹೊಸದಿಲ್ಲಿ,ಜು.25: ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಹಾಗೂ ಇತರರ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ದೂರು ದಾಖಲಿಸಿದೆ.
ಮಧ್ಯ ಪ್ರದೇಶದ ಉರ್ತನ್ ಉತ್ತರ ಕಲ್ಲಿದ್ದಲು ಬ್ಲಾಕ್ನ ಹಂಚಿಕೆ ವಿಷಯಕ್ಕೆ ಸಂಬಂಧಿಸಿ ವಿಚಾರಣೆಯನ್ನು ಆಲಿಸುತ್ತಿದ್ದ ವಿಶೇಷ ನ್ಯಾಯಾಧೀಶ ಭರತ್ ಪರಾಶರ್, ನವೀನ್ ಜಿಂದಾಲ್, ಅವರ ಕಂಪೆನಿ ಜಿಂದಾಲ್ ಸ್ಟೀಲ್ಸ್ ಪ್ರೈ.ಲಿ., ಡಿ.ಎನ್ ಅಬ್ರೊಲ್ (ಕಾರ್ಯಕಾರಿ ನಿರ್ದೇಶಕ), ವಿಕ್ರಾಂತ್ ಗುಜ್ರಾಲ್ (ಉಪಾಧ್ಯಕ್ಷ ಮತ್ತು ಸಿಇಒ), ಆನಂದ್ ಗೋಯಲ್ (ಜಂಟಿ ವ್ಯವಸ್ಥಾಪಕ ನಿರ್ದೇಶಕ) ಮತ್ತು ಸುಶೀಲ್ ಮರೂ (ವಿತ್ತ ನಿರ್ದೇಶಕ) ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಕಲ್ಲಿದ್ದಲು ಸಚಿವಾಲಯಕ್ಕೆ ವಂಚನೆ ಆರೋಪದಲ್ಲಿ ದೂರು ದಾಖಲಿಸಿದ್ದಾರೆ.
ಎಲ್ಲ ಆರೋಪಿಗಳು ಗುರುವಾರ ಆದೇಶ ಪ್ರತಿಗೆ ಅಧಿಕೃತವಾಗಿ ಸಹಿ ಹಾಕಲು ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ದೂರಿನ ವಿಚಾರಣೆಯನ್ನು ಸೆಪ್ಟೆಂಬರ್ 30ರಿಂದ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಜೆಎಸ್ಪಿಎಲ್ ಸಂಸ್ಥೆಯು ಮಧ್ಯ ಪ್ರದೇಶದ ಉರ್ತನ್ ಉತ್ತರ ಕಲ್ಲಿದ್ದಲು ಬ್ಲಾಕನ್ನು ತನ್ನ ಅನೇಕ ಯೋಜನೆಗಳಿಗೆ ಸ್ವಾಧೀನಪಡಿಸಿಕೊಳ್ಳಲಾದ ಜಮೀನಿನ ಕುರಿತು ಅರ್ಜಿ ಪ್ರತಿಯಲ್ಲಿ ಸುಳ್ಳು ಮಾಹಿತಿಯನ್ನು ದಾಖಲಿಸುವ ಮೂಲಕ ವಂಚನೆಯ ದಾರಿಯಲ್ಲಿ ಪಡೆದುಕೊಂಡಿದೆ ಎಂದು ವಾದಿಸಿದ ಸಿಬಿಐ ವಕೀಲ ವಿ.ಕೆ ಶರ್ಮಾ ಆರೋಪಿಗಳ ವಿರುದ್ಧ ದೂರು ದಾಖಲಿಸುವಂತೆ ಮನವಿ ಮಾಡಿದ್ದರು. ಉಪಕರಣ ಖರೀದಿಯಲ್ಲೂ ಜೆಎಸ್ಪಿಎಲ್ ಸುಳ್ಳು ಮಾಹಿತಿಯನ್ನು ನೀಡಿ ಕಲ್ಲಿದ್ದಲು ಸಚಿವಾಲಯವನ್ನು ವಂಚಿಸಿದೆ ಎಂದು ಸಿಬಿಐ ತನ್ನ ದೋಷಾರೋಪಣೆಯಲ್ಲಿ ತಿಳಿಸಿದೆ.