ಹೆಚ್ಚುತ್ತಿದೆ ಚೀನಾ ಬಲ: ನೌಕಾಪಡೆ ಮುಖ್ಯಸ್ಥರು ಹೇಳಿದ್ದೇನು?

ಹೊಸದಿಲ್ಲಿ, ಜು.26: ಚೀನಾದ ಮಿಲಿಟರಿ ಬಲವರ್ಧನೆ, ಅದರಲ್ಲೂ ಮುಖ್ಯವಾಗಿ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕ್ಷಿಪ್ರವಾಗಿ ಹೆಚ್ಚುತ್ತಿರುವ ನೌಕಾ ಹೆಜ್ಜೆ ಗುರುತಿಗೆ ಭಾರತದ ಸಶಸ್ತ್ರ ಪಡೆಗಳು, ಸೀಮಿತ ಬಜೆಟ್ ಮತ್ತು ಇತರ ಇತಿಮಿತಿಗಳ ನಡುವೆ ಸ್ಪಂದಿಸುವ ಅಗತ್ಯವಿದೆ ಎಂದು ಅಡ್ಮಿರಲ್ ಕರಮ್ಬೀರ್ ಸಿಂಗ್ ಹೇಳಿದ್ದಾರೆ.
ಹೊಸ ಯುಗದಲ್ಲಿ ಚೀನಾದ ರಾಷ್ಟ್ರೀಯ ರಕ್ಷಣಾ ನೀತಿ ಶೀರ್ಷಿಕೆಯ ಶ್ವೇತಪತ್ರವನ್ನು ಚೀನಾ ಬಿಡುಗಡೆ ಮಾಡಿದ ಮರುದಿನವೇ ನೌಕಾಪಡೆ ಮುಖ್ಯಸ್ಥರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕ ಹಾಗೂ ಇಂಡೋ- ಫೆಸಿಫಿಕ್ ಪ್ರದೇಶದಲ್ಲಿ ಅವುಗಳ ಕಾರ್ಯತಂತ್ರದ ನಡೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಈ ಶ್ವೇತಪತ್ರದಲ್ಲಿ ಭಾರತವನ್ನೂ ಉಲ್ಲೇಖಿಸಲಾಗಿದೆ. ಆದರೆ ಭಾರತ- ಚೀನಾ ಗಡಿಯುದ್ದಕ್ಕೂ ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಬೀಜಿಂಗ್ ಪ್ರಯತ್ನ ನಡೆಸಲಿದೆ ಎಂದು ಶ್ವೇತಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ನೌಕಾ ಹೆಜ್ಜೆಯನ್ನು ಭಾರತ ಕಡೆಗಣಿಸುವಂತಿಲ್ಲ. ಈಗಾಗಲೇ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ತನ್ನ ಮೊದಲ ಸಾಗರೋತ್ತರ ಬೆಲೆಯನ್ನು ಆಫ್ರಿಕಾ ಶೃಂಗದ ಡಿಜಿಬೋಟಿಯಲ್ಲಿ ಆರಂಭಿಸಿದ್ದು, ಕರಾಚಿ ಸುತ್ತಮುತ್ತಲು ಕೂಡಾ ತನ್ನ ನೌಕಾ ಸೌಲಭ್ಯಗಳ ಸ್ಥಾಪನೆ ಕಾರ್ಯ ಮುಂದುವರಿಸಿದೆ. ಯಾವುದೇ ಕಾಲದಲ್ಲಿ ಚೀನಾದ ಆರರಿಂದ ಎಂಟು ಯುದ್ಧನೌಕೆಗಳು ಈ ಪ್ರದೇಶದಲ್ಲಿರುತ್ತವೆ.
"ಇದು ಕೇವಲ ಚೀನಾದ ಶ್ವೇತಪತ್ರದಲ್ಲಷ್ಟೇ ಅಲ್ಲ; ಈ ಹಿಂದೆ ಕೂಡಾ ಇದನ್ನು ಹೇಳಲಾಗಿತ್ತು. ಜಾಗತಿಕ ಶಕ್ತಿಯಾಗಿ ರೂಪುಗೊಳ್ಳುವ ಉದ್ದೇಶದಿಂದ ಸಾಕಷ್ಟು ಸಂಪನ್ಮೂಲಗಳನ್ನು ಪಿಎಲ್ಎ ನೌಕಾಪಡೆಗೆ ವರ್ಗಾಯಿಸಲಾಗಿದೆ. ನಾವು ಇದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಹಾಗೂ ನಮ್ಮ ಸೀಮಿತ ಸಂಪನ್ಮೂಲ ಮತ್ತು ಇತಿಮಿತಿಗಳ ಹಿನ್ನೆಲೆಯಲ್ಲಿ ಹೇಗೆ ಇದಕ್ಕೆ ಸ್ಪಂದಿಸಬೇಕು ಎಂಬ ಬಗ್ಗೆ ಯೋಚಿಸಬೇಕಾಗಿದೆ" ಎಂದು ಹಡಗು ನಿರ್ಮಾಣ ಕುರಿತ ವಿಚಾರ ಸಂಕಿರಣದ ವೇಳೆ ಅಡ್ಮಿರಲ್ ಸಿಂಗ್ ಹೇಳಿದರು.
ನೌಕಾಪಡೆ ಎದುರಿಸುತ್ತಿರುವ ಬಜೆಟ್ ಇತಿಮಿತಿಗಳ ಬಗ್ಗೆ ಉಲ್ಲೇಖಿಸಿದ ಅವರು, "ನೌಕಾಪಡೆಯನ್ನು ಪ್ರಬಲವಾಗಿ ಬೆಳೆಸಲು ನಮಗೆ ದೀರ್ಘಾವಧಿಯ ವಿತ್ತೀಯ ನೆರವು ಅಗತ್ಯವಿದೆ. ನಾವು ಯೋಜನಾಬದ್ಧವಾಗಿ ಮುಂದುವರಿಯಲು ಇರುವ ಏಕೈಕ ಮಾರ್ಗ ಅದು. ಇದನ್ನು ನಾನು ನಿಯತವಾಗಿ ಹೇಳುತ್ತಾ ಬಂದಿದ್ದೇನೆ" ಎಂದು ಸ್ಪಷ್ಟಪಡಿಸಿದರು.