ಮಾಜಿ ಪೊಲೀಸ ಅಧಿಕಾರಿಗಳಾದ ವಂಝಾರ, ಅಮಿನ್ ದೋಷಮುಕ್ತ ಪ್ರಶ್ನಿಸದಿರಲು ಸಿಬಿಐ ನಿರ್ಧಾರ
ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣ:

ಡಿಜಿ ವಂಝಾರ
ಗುಜರಾತಿನ ಮಾಜಿ ಪೊಲೀಸ್ ಅಧಿಕಾರಿಗಳಿಬ್ಬರ ಖುಲಾಸೆಯನ್ನು ಪ್ರಶ್ನಿಸದಿರಲು ಸಿಬಿಐ ನಿರ್ಧಾರ
ಅಹ್ಮದಾಬಾದ್,ಜು.26: ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಗುಜರಾತಿನ ಮಾಜಿ ಪೊಲೀಸ್ ಅಧಿಕಾರಿಗಳಾದ ಡಿ.ಜಿ.ವಂಝಾರಾ ಮತ್ತು ಎನ್.ಕೆ.ಅಮೀನ್ ಅವರನ್ನು ಖುಲಾಸೆಗೊಳಿಸಿರುವುದರ ವಿರುದ್ಧ ತಾನು ಮೇಲ್ಮನವಿಯನ್ನು ಸಲ್ಲಿಸುವುದಿಲ್ಲ ಎಂದು ಸಿಬಿಐ ಇಲ್ಲಿಯ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.
ಸಿಬಿಐ ವಕೀಲ ಆರ್.ಸಿ.ಕೊಡೇಕರ್ ಅವರು ಈ ಕುರಿತು ಲಿಖಿತ ಹೇಳಿಕೆಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಆರ್.ಕೆ.ಚೂಡಾವಾಲಾ ಅವರಿಗೆ ಸಲ್ಲಿಸಿದರು. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆ.9ಕ್ಕೆ ನಿಗದಿಗೊಳಿಸಿದೆ.
ವಂಝಾರಾ ಮತ್ತು ಅಮೀನ್ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲು ಗುಜರಾತ್ ಸರಕಾರದ ಅನುಮತಿಯನ್ನು ಪಡೆದುಕೊಳ್ಳಲು ಸಿಬಿಐ ವಿಫಲಗೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೇ 2ರಂದು ಅವರಿಬ್ಬರ ವಿರುದ್ಧ ಕಲಾಪಗಳನ್ನು ಕೈಬಿಟ್ಟಿತ್ತು. ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕೃತ ಕರ್ತವ್ಯವನ್ನು ನಿರ್ವಹಿಸಿದ್ದರು ಎಂದು ಹೇಳಿದ್ದ ಗುಜರಾತ ಸರಕಾರವು ಅನುಮತಿ ನೀಡಲು ನಿರಾಕರಿಸಿತ್ತು.
ಇಶ್ರತ್ ತಾಯಿ ಶಮೀಮಾ ಕೌಸರ್ ಅವರು ವಂಝಾರಾ ಮತ್ತು ಅಮೀನ್ ಅವರ ಖುಲಾಸೆ ಅರ್ಜಿಗಳನ್ನು ವಿರೋಧಿಸಿದ್ದರು,ಆದರೆ ಅವರು ಈವರೆಗೆ ಮೇಲಿನ ನ್ಯಾಯಾಲಯವನ್ನು ಸಂಪರ್ಕಿಸಿಲ್ಲ.
ಪ್ರಕರಣದಲ್ಲಿಯ ಇತರ ನಾಲ್ವರು ಆರೋಪಿಗಳಾದ ಜಿ.ಎಲ್.ಸಿಂಘಾಲ,ತರುಣ ಬಾರೋತ್,ಅನಜು ಚೌಧರಿ ಮತ್ತು ಜೆ.ಜಿ.ಪರಮಾರ್ ಅವರೂ ತಮ್ಮನ್ನು ಆರೊಪಮುಕ್ತಗೊಳಿಸುವಂತೆ ಈಗ ಸಿಬಿಐ ನ್ಯಾಯಾಲಯವನ್ನು ಕೋರುವ ಸಾಧ್ಯತೆಯಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಐಪಿಎಸ್ ಅಧಿಕಾರಿಯಾಗಿರುವ ಸಿಂಘಾಲ್ ಹಾಲಿ ಗಾಂಧಿನಗರದಲ್ಲಿನ ಕಮಾಂಡೋ ತರಬೇತಿ ಕೇಂದ್ರದಲ್ಲಿ ಐಜಿ ಆಗಿದ್ದರೆ,ಚೌಧರಿ ರಾಜ್ಯ ಮೀಸಲು ಪೊಲೀಸ ಪಡೆಯಲ್ಲಿ ಕಮಾಂಡೊ ಆಗಿ ಸೇವೆಯಲ್ಲಿದ್ದಾರೆ. ಇತರ ಇಬ್ಬರು ನಿವೃತ್ತರಾಗಿದ್ದಾರೆ. ನ್ಯಾಯಾಲಯವು ಈ ಹಿಂದೆ ಮಾಜಿ ಐಪಿಎಸ್ ಅಧಿಕಾರಿ ಪಿ.ಪಿ.ಪಾಂಡೆ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.
2018,ಆಗಸ್ಟ್ನಲ್ಲಿ ವಂಝಾರಾ ಮತ್ತು ಅಮೀನ್ ಅವರ ಖುಲಾಸೆ ಅರ್ಜಿಗಳನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಅರ್ಜಿಗಳನ್ನು ವಿರೋಧಿಸಿದ್ದ ಸಿಬಿಐ,ವಂಝಾರಾ ನಕಲಿ ಎನ್ಕೌಂಟರ್ನ ರೂವಾರಿಯಾಗಿದ್ದರು ಮತ್ತು ಎನ್ಕೌಂಟರ್ ಸ್ಥಳದಲ್ಲಿ ಅಮೀನ್ ಉಪಸ್ಥಿತರಿದ್ದರು ಎನ್ನುವುದನ್ನು ಸಾಬೀತುಗೊಳಿಸಲು ಸಾಕಷ್ಟು ಸಾಕ್ಷಾಧಾರಗಳು ತನ್ನ ಬಳಿಯಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.