ಬಿಎಸ್ವೈ ಪ್ರಮಾಣ ವಚನ: ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ, ಮುಗಿಲು ಮುಟ್ಟಿದ ಹರ್ಷೋದ್ಘಾರ
![ಬಿಎಸ್ವೈ ಪ್ರಮಾಣ ವಚನ: ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ, ಮುಗಿಲು ಮುಟ್ಟಿದ ಹರ್ಷೋದ್ಘಾರ ಬಿಎಸ್ವೈ ಪ್ರಮಾಣ ವಚನ: ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ, ಮುಗಿಲು ಮುಟ್ಟಿದ ಹರ್ಷೋದ್ಘಾರ](/images/placeholder.jpg)
ಬೆಂಗಳೂರು, ಜು. 26: ನೂತನ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ರಾಜಭವನದ ಬಳಿಕ ಸಾವಿರಾರು ಮಂದಿ ಜಮಾಯಿಸಿ ಸಿಹಿ ಹಂಚಿ, ಪಟಾಕಿ ಹಚ್ವಿ ಸಂಭ್ರಮಿಸಿದರು.
ಶುಕ್ರವಾರ ಸಂಜೆ 6:31ರ ಸುಮಾರಿಗೆ ರಾಜಭವನದ ಗಾಜಿನಮನೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಯಡಿಯೂರಪ್ಪ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜಭವನದಲ್ಲಿ ನೆರೆದಿದ್ದ ಸಾವಿರಾರು ಮಂದಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳ ಹರ್ಷೊದ್ಘಾರ ಮುಗಿಲುಮುಟ್ಟಿತ್ತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಿಜೆಪಿ ಕಾರ್ಯಕರ್ತರು ಮತ್ತು ಬಿಎಸ್ವೈ ಅವರ ಅಭಿಮಾನಿಗಳು ಅವರ ಭಾವಚಿತ್ರ ಹಿಡಿದು ಜಯ ಘೋಷಣೆ ಮೊಳಗಿಸಿದರು. ಅಲ್ಲದೆ, ರಾಜಭವನದ ಹೊರಗೆ ಟಿವಿ ಪರದೆಯ ಮೇಲೆ ಯಡಿಯೂರಪ್ಪನವರ ಪ್ರಮಾಣ ವಚನ ಸಮಾರಂಭವನ್ನು ಕಣ್ತುಂಬಿಕೊಂಡರು.
ಇದೇ ವೇಳೆ ನೂತನ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದರಿಂದ ಬಿಎಸ್ವೈ ಅವರ ಡಾಲರ್ಸ್ ಕಾಲನಿಯಲ್ಲಿರುವ ದವಳಗಿರಿ ನಿವಾಸದ ಬಳಿ ಹಾಗೂ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಸಂಚಾರ ನಿರ್ಬಂಧ: ನೂತನ ಮುಖ್ಯಮಂತ್ರಿ ಬಿಎಸ್ವೈ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ವಿಧಾನಸೌಧ ಮತ್ತು ರಾಜಭವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಸಮಾರಂಭಕ್ಕೆ ಹಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಆ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಜಟಾಪಟಿ: ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ಪತ್ರಿಕೆ ಇದ್ದರೂ ಪೊಲೀಸರು ರಾಜಭವನ ಪ್ರವೇಶಕ್ಕೆ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಹಾಗೂ ವಾಗ್ವಾದ ನಡೆಯಿತು.
ಪಾಸ್ ಇದ್ದರೂ ರಾಜಭವನದ ಒಳಗೆ ಬಿಡಲು ಪೊಲೀಸರು ನಿರಾಕರಿಸಿದ್ದಕ್ಕಾಗಿ ಮಹಿಳೆಯರು ಜಗಳ ತೆಗೆದರು. ಇದೇ ವೇಳೆ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಗ ಮಹಿಳೆಯನ್ನು ವಶಕ್ಕೆ ಪಡೆಯಲು ಮುಂದಾದರೂ, ಈ ವೇಳೆ ಹಿರಿಯ ಅಧಿಕಾರಿಗಳ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಪೊಲೀಸ್ ಸರ್ಪಗಾವಲು: ಮುಖ್ಯಮಂತ್ರಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿಯೂ ಸೇರಿದಂತೆ ರಾಜಭವನ ಹಾಗೂ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
‘ಸಂವಿಧಾನ ಮತ್ತು ಶಾಸನಸಭೆ ನಿಯಮಗಳ ಪ್ರಕಾರ ಸದನದಲ್ಲಿ ಹಾಜರಿರುವ ಸದಸ್ಯರ ಪೈಕಿ ಬಹುಮತ ಬರಬೇಕು. ಅದರಲ್ಲಿ ಬಿಜೆಪಿ ಗೆಲುವು ಪಡೆಯಲಿದೆ. ಹೆರಿಗೆಗೂ ಮೊದಲೇ ಗಂಡೊ, ಹೆಣ್ಣೊ ಎಂದು ಹೇಳಲು ಸಾಧ್ಯವಿಲ್ಲ. ಬಹುಮತದ ಬಗ್ಗೆ ವಿಪಕ್ಷಗಳು ತಾಳ್ಮೆಯಿಂದ ಇರಲಿ’
-ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಶಾಸಕ