ನಮ್ಮ ಬಗ್ಗೆ ಮಾತನಾಡಿದರೆ ಮಾರ್ಕೆಟ್ ಹೆಚ್ಚಾಗುತ್ತೆ: ಡಿ.ಕೆ.ಶಿವಕುಮಾರ್
![ನಮ್ಮ ಬಗ್ಗೆ ಮಾತನಾಡಿದರೆ ಮಾರ್ಕೆಟ್ ಹೆಚ್ಚಾಗುತ್ತೆ: ಡಿ.ಕೆ.ಶಿವಕುಮಾರ್ ನಮ್ಮ ಬಗ್ಗೆ ಮಾತನಾಡಿದರೆ ಮಾರ್ಕೆಟ್ ಹೆಚ್ಚಾಗುತ್ತೆ: ಡಿ.ಕೆ.ಶಿವಕುಮಾರ್](https://www.varthabharati.in/sites/default/files/images/articles/2019/07/26/202332-1564150903.jpg)
ಹೊಸದಿಲ್ಲಿ, ಜು.26: ನಮ್ಮಂತಹವರ ಬಗ್ಗೆ ಮಾತನಾಡಿದರೆ ಅವರಿಗೆ ಮಾರ್ಕೆಟ್ ಹೆಚ್ಚಾಗುತ್ತದೆ. ಅದಕ್ಕಾಗಿಯೇ ರಮೇಶ್ ಜಾರಕಿಹೊಳಿ ನಮ್ಮ ಬಗ್ಗೆ ಆರೋಪಗಳನ್ನು ಮಾಡುತ್ತಲೇ ಇರುತ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಪ್ರೀತಿಯಿಂದ ನಮ್ಮ ಬಗ್ಗೆ ಮಾತನಾಡುತ್ತಾರೆ. ಇನ್ನು ಕೆಲವರು ತಮ್ಮ ಮಾರ್ಕೆಟ್ ಹೆಚ್ಚಿಸಿಕೊಳ್ಳಲು ನಮ್ಮಂತವರ ಬಗ್ಗೆ ಪದೇ ಪದೇ ಮಾತನಾಡುತ್ತಿರುತ್ತಾರೆ ಎಂದು ಟೀಕಿಸಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರು ಯಾರೂ ಅವಿದ್ಯಾವಂತರಿಲ್ಲ. ಎಲ್ಲರೂ ಎರಡು-ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಅನುಭವ ಹೊಂದಿದವರೇ ಆಗಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಅವರು ನಮ್ಮ ಗೆಳೆಯರು, ಇವರಿಗೆಲ್ಲ ಈ ರೀತಿಯ ಪರಿಸ್ಥಿತಿ ಎದುರಾಗಬಾರದಿತ್ತು ಎಂದು ಶಿವಕುಮಾರ್ ಹೇಳಿದರು.
ಆದರೆ, ಏನು ಮಾಡುವುದು ಇವತ್ತಿನ ಪರಿಸ್ಥಿತಿಯನ್ನು ತಮ್ಮ ಮೇಲೆ ಅವರೇ ಆಹ್ವಾನಿಸಿಕೊಂಡ ಆಪತ್ತು. ಆದುದರಿಂದ, ನಾವು ಈ ವಿಚಾರದಲ್ಲಿ ಏನು ಮಾಡಲು ಸಾಧ್ಯವಿಲ್ಲ. ಶಾಸಕರ ಅನರ್ಹತೆ ಕುರಿತು ಸ್ಪೀಕರ್ ಕೈಗೊಂಡಿರುವ ತೀರ್ಪನ್ನು ನಾನು ಗೌರವಿಸುತ್ತೇನೆ ಎಂದು ಅವರು ತಿಳಿಸಿದರು.
ಯಡಿಯೂರಪ್ಪ ಛಲ ಬಿಡದೆ ನಮ್ಮನ್ನು ಅಧಿಕಾರದಿಂದ ಇಳಿಸಿದ್ದಾರೆ. ಬಿಜೆಪಿಯನ್ನು ಮತ್ತೆ ಅಧಿಕಾರದ ಗುದ್ದುಗೆಗೆ ಏರಿಸುವಲ್ಲಿ ಸಫಲರಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿರುವುದು ಸಂತಸದ ವಿಚಾರ ಎಂದು ಶಿವಕುಮಾರ್ ಹೇಳಿದರು.
ಆದರೆ, ಬಿಜೆಪಿ ಪಕ್ಷದಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಷ್ಮಾ ಸ್ವರಾಜ್ ಅವರಂತಹವರನ್ನು ಮೂಲೆ ಗುಂಪು ಮಾಡಲಾಗಿದೆ. ಆದರೆ, 75 ವರ್ಷ ದಾಟಿರುವ ಯಡಿಯೂರಪ್ಪಗೆ ಮಾತ್ರ ವಿಶೇಷ ವಿನಾಯಿತಿ ಏಕೆ? ಎಂದು ಬಿಜೆಪಿಯ ಆಂತರಿಕ ವಲಯದಲ್ಲಿಯೇ ಚರ್ಚೆಗಳು ಆರಂಭವಾಗಿವೆ ಎಂದು ಅವರು ತಿಳಿಸಿದರು.