ಮೈತ್ರಿ ಸರಕಾರ ಪತನಕ್ಕೆ ನಮ್ಮ ಕುಟುಂಬ ಕಾರಣವಲ್ಲ: ಸತೀಶ್ ಜಾರಕಿಹೊಳಿ
![ಮೈತ್ರಿ ಸರಕಾರ ಪತನಕ್ಕೆ ನಮ್ಮ ಕುಟುಂಬ ಕಾರಣವಲ್ಲ: ಸತೀಶ್ ಜಾರಕಿಹೊಳಿ ಮೈತ್ರಿ ಸರಕಾರ ಪತನಕ್ಕೆ ನಮ್ಮ ಕುಟುಂಬ ಕಾರಣವಲ್ಲ: ಸತೀಶ್ ಜಾರಕಿಹೊಳಿ](https://www.varthabharati.in/sites/default/files/images/articles/2019/07/26/202333-1564151065.jpg)
ಬೆಂಗಳೂರು, ಜು.26: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಪತನಕ್ಕೆ ಜಾರಕಿಹೊಳಿ ಕುಟುಂಬ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಈ ಸರಕಾರದ ಪತನಕ್ಕೂ ನಮ್ಮ ಕುಟುಂಬಕ್ಕೂ ಸಂಬಂಧವಿಲ್ಲ. ಇದಕ್ಕೆಲ್ಲ ಒಂದು ವಸ್ತು ಕಾರಣ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬದ ಒಳಜಗಳ, ರಮೇಶ್ ಜಾರಕಿಹೊಳಿ ಅಸಮಾಧಾನದಿಂದ ರಾಜ್ಯ ಸರಕಾರ ಪತನವಾಗಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾದದ್ದು. ಇಂತಹ ಕೆಟ್ಟ ಹೆಸರು ನಮ್ಮ ಕುಟುಂಬಕ್ಕೆ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಯಾವ ವಸ್ತುವಿನ ಕಾರಣಕ್ಕಾಗಿ ಈ ಸರಕಾರ ಪತನವಾಗಿದೆ ಎಂಬುದನ್ನು ಕೆಲವೇ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಮೂವರು ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ನಿರ್ಧಾರ ಸ್ವಾಗತಾರ್ಹ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಶಾಸಕರನ್ನು ಅನರ್ಹ ಮಾಡುವಂತೆ ಈ ಹಿಂದೆಯೇ ನಾನು ಮನವಿ ಮಾಡಿದ್ದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಹೈಕಮಾಂಡ್ ಮೊದಲೇ ಕಠಿಣ ಕ್ರಮ ಕೈಗೊಂಡಿದ್ದರೆ, ಇವತ್ತು ಸರಕಾರ ಪತನವಾಗುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಇತರ ಶಾಸಕರ ವಿರುದ್ಧ ಈಗಲಾದರೂ ಕಠಿಣ ಕ್ರಮ ಕೈಗೊಳ್ಳಲೇಬೇಕು. ಅನರ್ಹತೆ ಪ್ರಕರಣವನ್ನು ಇತ್ಯರ್ಥ ಪಡಿಸಲು ಒಂದು ವರ್ಷ ಬೇಕಾಗುತ್ತದೆ. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದರೆ, ಅವರು ಮೇಲ್ಮನವಿ ಸಲ್ಲಿಸುತ್ತಾರೆ. ಅವರ ಪರವಾಗಿ ತೀರ್ಪು ಬಂದರೆ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.