ಯಾವುದೇ ಪರಿಶೀಲನೆಯಿಲ್ಲದೆ ಮಸೂದೆಗಳ ಅಂಗೀಕಾರ: 17 ಪ್ರತಿಪಕ್ಷಗಳಿಂದ ಸಭಾಪತಿ ವೆಂಕಯ್ಯ ನಾಯ್ಡುಗೆ ಪತ್ರ

ಹೊಸದಿಲ್ಲಿ,ಜು.26: ಸಂಸದೀಯ ಸ್ಥಾಯಿ ಅಥವಾ ಆಯ್ಕೆ ಸಮಿತಿಗಳ ಯಾವುದೇ ಪರಿಶೀಲನೆಯಿಲ್ಲದೆ ಸಂಸತ್ತಿನಲ್ಲಿ ಮಸೂದೆಗಳು ಅವಸರದಲ್ಲಿ ಅಂಗೀಕಾರಗೊಳ್ಳುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ 17 ವಿರೋಧ ಪಕ್ಷಗಳು ರಾಜ್ಯಸಭೆಯ ಸಭಾಪತಿ ಹಾಗೂ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರವನ್ನು ಬರೆದಿವೆ. ಇದು ಸ್ಥಾಪಿತ ಪದ್ಧತಿಯ ಉಲ್ಲಂಘನೆಯಾಗಿದೆ ಎಂದು ಅವು ಬೆಟ್ಟುಮಾಡಿವೆ.
ಕಾಂಗ್ರೆಸ್,ಎಸ್ಪಿ,ತೃಣಮೂಲ,ಬಿಎಸ್ಪಿ,ಆರ್ಜೆಡಿ,ಟಿಡಿಪಿ,ಸಿಪಿಐ ಮತ್ತು ಸಿಪಿಎಂ ಸೇರಿದಂತೆ 17ಪಕ್ಷಗಳ ನಾಯಕರು ಪತ್ರಕ್ಕೆ ಸಹಿ ಹಾಕಿದ್ದಾರೆ.14ನೇ ಲೋಕಸಭೆಯಲ್ಲಿ ಶೇ.60ರಷ್ಟು ಮತ್ತು 15ನೇ ಲೋಕಸಭೆಯಲ್ಲಿ ಶೇ.71ರಷ್ಟು ಮಸೂದೆಗಳನ್ನು ಸಂಸದೀಯ ಸಮಿತಿಗಳ ಪರಿಶೀಲನೆಗಾಗಿ ಸಲ್ಲಿಸಲಾಗಿತ್ತು. ಆದರೆ 16ನೇ ಲೋಕಸಭೆಯಲ್ಲಿ ಕೇವಲ ಶೇ.26ರಷ್ಟು ಮಸೂದೆಗಳನ್ನು ಪರಿಶೀಲನೆಗಾಗಿ ಒಪ್ಪಿಸಲಾಗಿತ್ತು. ಈಗ 17ನೇ ಲೋಕಸಭೆಯ ಮೊದಲ ಅಧಿವೇಶನದಲ್ಲಿ ಈಗಾಗಲೇ 14 ಮಸೂದೆಗಳು ಅಂಗೀಕಾರಗೊಂಡಿವೆ ಮತ್ತು ಇವುಗಳ ಪೈಕಿ ಒಂದನ್ನೂ ಸ್ಥಾಯಿ ಸಮಿತಿ ಅಥವಾ ಆಯ್ಕೆ ಸಮಿತಿಯ ಪರಿಶೀಲನೆಗೆ ಒಪ್ಪಿಸಿರಲಿಲ್ಲ ಎಂದು ಪತ್ರದಲ್ಲಿ ತಿಳಿಸಿರುವ ಪ್ರತಿಪಕ್ಷಗಳು,ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವಂತೆ ಸಭಾಪತಿಗಳನ್ನು ಕೋರಿಕೊಂಡಿವೆ.