ಕಂಪೆನಿಗಳ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಹಸಿರು ನಿಶಾನೆ

ಹೊಸದಿಲ್ಲಿ, ಜು.26: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅನುಸರಣೆಯನ್ನು ಬಿಗಿಗೊಳಿಸುವ ಮತ್ತು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣದ (ಎನ್ಸಿಎಲ್ಟಿ) ಮೇಲೆ ಪ್ರಕರಣಗಳ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿರುವ ಕಂಪೆನಿಗಳ (ತಿದ್ದುಪಡಿ) ಮಸೂದೆಗೆ ಶುಕ್ರವಾರ ಲೋಕಸಭೆಯಲ್ಲಿ ಅಂಗೀಕಾರ ದೊರೆಯಿತು.
ಕೊರ್ಪೊರೇಟ್ ಆಡಳಿತ ನಿಮಯಗಳನ್ನು ಬಲಪಡಿಸಲು ಹೆಚ್ಚಿನ ಜವಾಬ್ದಾರಿ ಮತ್ತು ಉತ್ತಮ ಅನುಷ್ಟಾನವನ್ನು ಈ ಕರಡು ಮಸೂದೆ ಖಚಿತಗೊಳಿಸುತ್ತದೆ ಎಂದು ವಿತ್ತ ಮತ್ತು ಕೊರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ಹಿಂದೆ ತರಲಾದ ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ನ ಅಧಿರ್ ರಂಜನ್ ಚೌದರಿ ಮತ್ತು ಟಿಎಂಸಿಯ ಸೌಗತಾ ರಾಯ್, ಈ ಕಾನೂನಿಗೆ ಹಲವು ಬಾರಿ ತಿದ್ದುಪಡಿ ಮಾಡಲಾಗಿರುವ ಕಾರಣ ಸುಗ್ರೀವಾಜ್ಞೆ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಮಸೂದೆಯನ್ನು ವಿನಾಶಕಾರಿ ಎಂದು ವ್ಯಾಖ್ಯಾನಿಸಿರುವ ಬಿಜೆಡಿಯ ಪಿನಕಿ ಮಿಶ್ರಾ ಈ ಕಾನೂನನ್ನು ಅಧಿಕಾರಿಗಳು ಸಿದ್ಧಪಡಿಸಿದ್ದು ಜನಪ್ರತಿನಿಧಿಗಳು ಕೇವಲ ರಬ್ಬರ್ ಸ್ಟಾಂಪ್ಗಳಾಗಿದ್ದಾರೆ ಎಂದು ದೂರಿದ್ದಾರೆ. ಕಂಪೆನಿಗಳ ನೋಂದಣಾಧಿಕಾರಿಗೆ ಹೆಚ್ಚಿನ ಅಧಿಕಾರವನ್ನು ನೀಡಿರುವುದು ಸರಿಯಲ್ಲ ಎಂದು ಡಿಎಂಕೆಯ ಎ. ರಾಜಾ ತಿಳಿಸಿದ್ದಾರೆ.