ಮೆಟಗಾನಹಳ್ಳಿ ಕ್ವಾರಿಗೆ ತ್ಯಾಜ್ಯ ವಿಲೇವಾರಿ: ಮೇಯರ್ ಗಂಗಾಂಬಿಕೆ
![ಮೆಟಗಾನಹಳ್ಳಿ ಕ್ವಾರಿಗೆ ತ್ಯಾಜ್ಯ ವಿಲೇವಾರಿ: ಮೇಯರ್ ಗಂಗಾಂಬಿಕೆ ಮೆಟಗಾನಹಳ್ಳಿ ಕ್ವಾರಿಗೆ ತ್ಯಾಜ್ಯ ವಿಲೇವಾರಿ: ಮೇಯರ್ ಗಂಗಾಂಬಿಕೆ](https://www.varthabharati.in/sites/default/files/images/articles/2019/07/26/202398-1564161412.jpg)
ಬೆಂಗಳೂರು, ಜು.26: ರಾಜಧಾನಿಯಲ್ಲಿ ಉಲ್ಬಣಿಸುತ್ತಿರುವ ಕಸದ ಸಮಸ್ಯೆಗೆ ಕಡಿವಾಣ ಹಾಕಲು ಮೆಟಗಾನಹಳ್ಳಿ ಕ್ವಾರಿಗೆ ತ್ಯಾಜ್ಯ ವಿಲೇವಾರಿ ಮಾಡುವಂತೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳಿಗೆ ಮೇಯರ್ ಗಂಗಾಂಬಿಕೆ ಆದೇಶಿಸಿದ್ದಾರೆ.
ಶುಕ್ರವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಸದ ಸಮಸ್ಯೆ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಆಗದೇ ಇದ್ದರೆ ಸಾರ್ವಜನಿಕರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಲ್ಲದೆ ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಾರೆ. ಹೀಗಾಗಿ ಕೂಡಲೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ನಗರದಲ್ಲಿ ಉತ್ಪತ್ತಿ ಆಗುವ ಕಸವನ್ನು ಶೀಘ್ರ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಅದಕ್ಕೆ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಪ್ರತಿಕ್ರಿಯಿಸಿ, ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಿರುವ ಪರಿಣಾಮ ಕಸದ ಸಮಸ್ಯೆ ಬಿಗಡಾಯಿಸಿದೆ. ಬೆಳ್ಳಳ್ಳಿ ಕ್ವಾರಿ ಪಕ್ಕದಲ್ಲೇ ಮಿಟಗಾನಹಳ್ಳಿ ಕ್ವಾರಿ ಇದ್ದು, ಅದರಲ್ಲಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಬಹುದಾಗಿದೆ. ಈ ಸಂಬಂಧ ಈಗಾಗಲೇ ಅಲ್ಪಾವಧಿ ಟೆಂಡರ್ ಕರೆದಿದ್ದು, ವಾರಾದೊಳಗಾಗಿ ಕ್ವಾರಿಗೆ ಕಸ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಬಲ್ಕ್ ಜನರೇಟರ್ಸ್ಗಳಲ್ಲಿ ಉತ್ಪತ್ತಿ ಆಗುವ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಣ ಕಸ ವಿಲೆವಾರಿ ಮಾಡಲು ಈಗಾಗಲೇ ಚಿಂದಿ ಆಯುವ ಹಾಗೂ ಎನ್ಜಿಒಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 8,000 ಮಂದಿ ಚಿಂದಿ ಆಯುವವರಿದ್ದು, ಎಲ್ಲರೂ ಒಣ ಕಸ ಸಂಗ್ರಹಿಸಿ ಸಂಸ್ಕರಣಾ ಘಟಕಗಳಿಗೆ ಕೊಡುತ್ತಿದ್ದಾರೆ ಎಂದು ವಿವರಿಸಿದರು.
ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಲು ಕಣ್ಣೂರಲ್ಲಿ ಸ್ಥಳ ಗುರುತಿಸಲಾಗಿದೆ. ಆದರೆ, ನಾಗರಿಕರು ರಸ್ತೆ, ಖಾಲಿ ನಿವೇಶಗಳಲ್ಲಿ ರಾತ್ರಿ ವೇಳೆ ತಂದು ಸುರಿಯುತ್ತಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಈ ವೇಳೆ ಗಂಗಾಂಬಿಕೆ ಮಾತನಾಡಿ, ಕಟ್ಟಡ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವ ಪರಿಣಾಮ ನಾಗರಿಕರಿಗೆ ತೀವ್ರ ಸಮಸ್ಯೆ ಆಗುತ್ತಿದೆ. ಆದ್ದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಸ್ಥಳ ಗುರುತಿಸಿ ಪಟ್ಟಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಮೇಯರ್ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಮಾಜಿ ಮೇಯರ್ ಮಂಜುನಾಥ ರೆಡ್ಡಿ, ಕಟ್ಟೆ ಸತ್ಯನಾರಾಯಣ, ಪದ್ಮಾವತಿ, ಆಡಳಿತ ಪಕ್ಷದ ಮಾಜಿ ನಾಯಕ ಸತ್ಯನಾರಾಯಣ ಹಾಗೂ ಜೆಡಿಎಸ್ನ ನಾಯಕಿ ನೇತ್ರಾ ನಾರಾಯಣ್ ಉಪಸ್ಥಿತರಿದ್ದರು.
ಪ್ರಾಣಿ ತ್ಯಾಜ್ಯ ವಿಲೇವಾರಿಗೆ ಟೆಂಡರ್:
ಪ್ರಾಣಿ ತ್ಯಾಜ್ಯ ನಿರ್ವಹಣೆ ಗುತ್ತಿಗೆ ಪಡೆಯುವವರು ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ಹೊಂದಿರದೇ ಇದ್ದಲ್ಲಿ, ಘಕಟವಿರುವವರ ಜತೆ ಒಡಂಬಡಿಕೆ ಮಾಡಿಕೊಂಡು ಕೆಲಸ ನಿರ್ವಹಿಸಬೇಕು. ಕಂಟೇನರ್ ಮಾದರಿಯ ಆಟೋಗಳ ಮೂಲಕ ತ್ಯಾಜ್ಯ ಸಂಗ್ರಹಿಸಿ, ಕಂಟೆನರ್ ವಾಹನಗಳಿಗೆ ಕೊಡಲಾಗುತ್ತದೆ. ಅದನ್ನು ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ಯಲಿದ್ದಾರೆ. ಅಲ್ಲಿ ಮೀನು ಮತ್ತು ಕೋಳಿಗಳಿಗೆ ಆಹಾರ ತಯಾರಿಸಲಾಗುತ್ತದೆ ಎಂದು ಆಯುಕ್ತರು (ಘನತ್ಯಾಜ್ಯ ವಿಭಾಗ) ಮಾಹಿತಿ ನೀಡಿದರು.
ಪ್ರಾಣಿ ತ್ಯಾಜ್ಯ ಟೆಂಡರ್ ಜಾರಿಯಾದ ಬಳಿಕ ಎಲ್ಲ ಮಳಿಗೆಗಳು ಸಮರ್ಪಕವಾಗಿ ತ್ಯಾಜ್ಯವನ್ನು ಗುತ್ತಿಗೆದಾರರಿಗೆ ಕೊಡಬೇಕು. ಗುತ್ತಿಗೆದಾರರಿಗೆ ನೀಡದೆ ರಾಜಕಾಲುವೆ, ರಸ್ತೆ ಪಕ್ಕ ಬಿಸಾಡುವುದು ಗಮನಕ್ಕೆ ಬಂದಲ್ಲಿ ಅಂತಹ ಮಳಿಗೆಯ ಪರವಾನಿಗೆ ರದ್ದುಗೊಳಿಸಲಾಗುವುದು.
-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ
ಉದ್ಯಾನನಗರಿಯಲ್ಲಿ 4 ಸಾವಿರಕ್ಕೂ ಹೆಚ್ಚು ಮಾಂಸದ ಅಂಗಡಿಗಳಿವೆ. ಪ್ರತಿನಿತ್ಯ 40 ಟನ್ ಪ್ರಾಣಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ರವಿವಾರ ಹಾಗೂ ವಿಶೇಷ ದಿನಗಳಲ್ಲಿ 80 ರಿಂದ 90 ಟನ್ ಮಾಂಸದ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಈ ಸಂಬಂಧ ಪಾಲಿಕೆ ಎಂಟು ವಲಯಗಳಲ್ಲಿ ಪ್ರತ್ಯೇಕ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.
-ಗಂಗಾಂಬಿಕೆ, ಬಿಬಿಎಂಪಿ ಮೇಯರ್