ಡಾ. ಪಾಯಲ್ ತಡ್ವಿ ಸಾವು ಪ್ರಕರಣ: ಡೆತ್ ನೋಟ್ ನಲ್ಲಿ ವೈದ್ಯೆ ಹೇಳಿದ್ದೇನು ?

ಮುಂಬೈ, ಜು.26: ಮುಂಬೈಯ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ಮೂವರು ಸಹೋದ್ಯೋಗಿ ವೈದ್ಯರ ಮಾನಸಿಕ ಕಿರುಕುಳ, ನಿಂದನೆ ಮತ್ತು ದುರ್ವರ್ತನೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳು ತ್ತಿರುವುದಾಗಿ ಪಾಯಲ್ ತಡ್ವಿ ಎಂಬ ವೈದ್ಯೆ ಸಾಯುವ ಮುನ್ನ ತನ್ನ ಮನೆಯವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದು, ಈ ಪತ್ರವನ್ನು ಮುಂಬೈ ಪೊಲೀಸರು ಸಾರ್ವಜನಿಕರ ಅವಗಾಹನೆಗೆ ಬಿಡುಗಡೆಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ 1,200 ಪುಟಗಳ ಆರೋಪಪಟ್ಟಿಯಲ್ಲಿ ಆತ್ಮಹತ್ಯೆ ಕುರಿತು ಬರೆದಿರುವ ಪತ್ರವೂ ಸೇರಿದೆ. ಹೇಮಾ ಅಹುಜಾ, ಭಕ್ತಿ ಮೆಹರೆ ಮತ್ತು ಅಂಕಿತಾ ಖಂಡೇಲ್ವಾಲ್ ತನಗೆ ಮತ್ತು ಮತ್ತೋರ್ವ ವಿದ್ಯಾರ್ಥಿನಿ ಸ್ನೇಹ ಶಿಂಧೆಗೆ ಕಿರುಕುಳ ನೀಡಿದ್ದರು. ಈ ಚಿತ್ರಹಿಂಸೆ ನಿರಂತರ ಮುಂದುವರಿದಿದೆ ಎಂದು ಪಾಯಲ್ ಪತ್ರದಲ್ಲಿ ಬರೆದಿದ್ದಾರೆ. ಹಿಂದುಳಿದ ತಡ್ವಿ-ಭೀಲ್ ಸಮುದಾಯಕ್ಕೆ ಸೇರಿರುವ ವೈದ್ಯಕೀಯ ವಿದ್ಯಾರ್ಥಿನಿ ಪಾಯಲ್ ಮೇ 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಮನೆಯವರಿಗೆ ಬರೆದಿದ್ದ ಪತ್ರದಲ್ಲಿ ಅವರು ‘ಉತ್ತಮ ಶಿಕ್ಷಣ ಪಡೆಯಲು ಅವಕಾಶವಿದೆಯೆಂದು ನಿರೀಕ್ಷಿಸಿ ಈ ಕಾಲೇಜಿಗೆ ಬಂದೆ. ಆದರೆ ಇಲ್ಲಿ ಜನರು ವರ್ಣಭೇದ ಆರಂಭಿಸಿದರು. ಆರಂಭದಲ್ಲಿ ನಾನು ಮತ್ತು ಸ್ನೇಹಲ್ ಸುಮ್ಮನಿದ್ದೆವು. ಆದರೆ ಕಿರುಕುಳ ಹೆಚ್ಚಿದಾಗ ಅನಿವಾರ್ಯವಾಗಿ ಅವರ ವಿರುದ್ಧ ದೂರು ನೀಡಿದೆವು. ಇದರಿಂದ ಪ್ರಯೋಜನವಾಗಲಿಲ್ಲ.
ಆ ಬಳಿಕ ನನ್ನ ವೈಯಕ್ತಿಕ ಬದುಕು, ವೃತ್ತಿಬದುಕು ಎಲ್ಲವೂ ಕಳೆದುಹೋಯಿತು. ನಾಯರ್ ಆಸ್ಪತ್ರೆಯಲ್ಲಿ ತಾವು (ಹೇಮಾ, ಭಕ್ತಿ, ಅಂಕಿತಾ) ಇರುವವರೆಗೆ ನನಗೆ ಏನನ್ನೂ ಕಲಿಯಲು ಬಿಡುವುದಿಲ್ಲ ಎಂದವರು ಬೆದರಿಸಿದ್ದಾರೆ. ಸ್ತ್ರೀರೋಗ ತಜ್ಞೆಯಾಗಿ ಹೆಚ್ಚಿನ ಅನುಭವ ಪಡೆಯಲು ಅವರು ಅವಕಾಶವನ್ನೇ ನೀಡದೆ, ಕಚೇರಿ ಕೆಲಸಕ್ಕೆ ತಮ್ಮನ್ನು ನಿಯೋಜಿಸಿದರು. ಕಳೆದ 3 ತಿಂಗಳಿಂದ ನನಗೆ ರೋಗಿಗಳ ಕೋಣೆಗೆ ಪ್ರವೇಶ ನಿರಾಕರಿಸಲಾಗಿದೆ. ಕಂಪ್ಯೂಟರ್ ಸೆಕ್ಷನ್ನಲ್ಲಿ ಕುಳಿತು ಕಂಪ್ಯೂಟರ್ ಎಂಟ್ರಿ ಮಾಡಲು ನನ್ನನ್ನು ನಿಯೋಜಿಸಿದ್ದಾರೆ. ಈ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮೇಡಂಗೆ ಪರಿಸ್ಥಿತಿಯನ್ನು ವಿವರಿಸಲು ಹಲವು ಬಾರಿ ಪ್ರಯತ್ನಿಸಿದೆ, ಆದರೆ ಆಗಲಿಲ್ಲ. ಈಗ ಯಾವ ದಾರಿಯೂ ಉಳಿದಿಲ್ಲ. ಈ ‘ದಿ ಎಂಡ್’ ಹೇಳುವುದಷ್ಟೇ ಉಳಿದಿದೆ ’’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಪತ್ರವನ್ನು ಪಾಯಲ್ ತಡ್ವಿಯ ಮರಣ ಹೇಳಿಕೆ ಎಂದು ಪರಿಗಣಿಸುವ ಸಾಧ್ಯತೆಯಿದೆ. ಪಾಯಲ್ ತಡ್ವಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಹೇಮಾ ಅಹುಜಾ, ಭಕ್ತಿ ಮೆಹರೆ ಮತ್ತು ಅಂಕಿತಾ ಖಂಡೇಲ್ವಾಲ್ರನ್ನು ಬಂಧಿಸಲಾಗಿದೆ.