ಮಂಡ್ಯ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇ-ಆಫೀಸ್ಗೆ ಚಾಲನೆ
![ಮಂಡ್ಯ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇ-ಆಫೀಸ್ಗೆ ಚಾಲನೆ ಮಂಡ್ಯ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಇ-ಆಫೀಸ್ಗೆ ಚಾಲನೆ](https://www.varthabharati.in/sites/default/files/images/articles/2019/07/26/202427-1564165471.jpg)
ಮಂಡ್ಯ, ಜು.26: ಆಡಳಿತವನ್ನು ಅತ್ಯಂತ ಪರಿಣಾಮಕಾರಿ ಹಾಗೂ ಪಾರದರ್ಶಕಗೊಳಿಸುವ ಉದ್ದೇಶದಿಂದ ಇ-ಆಫೀಸ್ ತಂತ್ರಾಂಶ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ರಾಜಕುಮಾರ್ ಖತ್ರಿ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಶುಕ್ರವಾರ ಇ-ಆಫೀಸ್ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ತಂತ್ರಾಂಶದ ಅನುಷ್ಠಾನದಿಂದ ಹಲವು ಪ್ರಯೋಜನಗಳಿದ್ದು, ಸಾರ್ವಜನಿಕರಿಗೆ ಹಾಗೂ ಸಿಬ್ಬಂದಿಗಳ ಕಾರ್ಯನಿರ್ವಹಣೆಗೂ ಸುಲಭವಾಗಲಿದೆ ಎಂದರು.
ಇ-ಆಫೀಸ್ ಯೋಜನೆಯಿಂದ ಕಛೇರಿಯಲ್ಲಿ ಕಾಗದದ ಬಳಕೆಯು ಕಡಿಮೆಯಾಗುವುದು. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳ ಮಾಹಿತಿಯನ್ನು ಇ-ಆಫೀಸ್ ಕಡತ ಸಂಖ್ಯೆ ಮೂಲಕ ಯಾವ ಹಂತದಲ್ಲಿದೆ ಎಂಬ ಮಾಹಿತಿಯನ್ನು ತಿಳಿಯಬಹುದು ಎಂದು ಅವರು ತಿಳಿಸಿದರು.
ಕಡತಗಳು ಕ್ರಮಬದ್ದವಾಗಿ ನಿರ್ವಹಣೆಯಾಗುವುದಲ್ಲದೇ, ಕಡತಗಳೂ ಕೈತಪ್ಪುವ ಸಂಭವವಿರುವುದಿಲ್ಲ. ಕಡತಗಳ ನಿರ್ವಹಣೆಯ ವ್ಯವಸ್ಥೆ ಸುಧಾರಿಸುವುದು. ಮೇಲಾಧಿಕಾರಿಗಳ ಹಂತದಲ್ಲಿ ಕಡತ ವಿಲೇವಾರಿ ಮೇಲ್ವಿಚಾರಣೆಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ಈ ಯೋಜನೆಯನ್ನು ಹಂತ ಹಂತವಾಗಿ ಉಪವಿಭಾಗಾಧಿಕಾರಿಗಳ ಕಛೇರಿ ಹಾಗೂ ತಹಶೀಲ್ದಾರ್ ಕಛೇರಿಗಳಿಗೂ ಸಹ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಅಪರ ಜಿಲ್ಲಾಧಿಕಾರಿ ಟಿ.ಯೊಗೇಶ್, ಮಂಡ್ಯ ಉಪವಿಭಾಗಧಿಕಾರಿ ಹೊಟೇಲ್ ಶಿವಪ್ಪ ಉಪಸ್ಥಿತರಿದ್ದರು.