ಮುಂಬೈ: ಮಳೆ ನೀರಿನಲ್ಲಿ ತೇಲುತ್ತಿದೆ ಪ್ಯಾಸೆಂಜರ್ ರೈಲು!
ಪ್ರವಾಹದ ಮಧ್ಯೆ ಸಿಲುಕಿದ 700ಕ್ಕೂ ಅಧಿಕ ಪ್ರಯಾಣಿಕರು

Photo : ANI
ಮುಂಬೈ, ಜು.27: ಮುಂಬೈ ಮಹಾನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮುಂಬೈ-ಕೋಲ್ಹಾಪುರ ಮಧ್ಯೆ ಸಂಚರಿಸುವ ಮಹಾಲಕ್ಷ್ಮೀ ಎಕ್ಸ್ಪ್ರೆಸ್ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಬದ್ಲಾಪುರ ಹಾಗೂ ವಾಂಗಾನಿ ಮಧ್ಯೆ ನೀರಿನಿಂದ ಜಲಾವೃತವಾಗಿರುವ ರೈಲು ಹಳಿಯ ಮಧ್ಯೆ ಸಿಲುಕಿ ಹಾಕಿಕೊಂಡಿದೆ.
ಸುಮಾರು 700 ಕ್ಕೂ ಅಧಿಕ ಮಂದಿ ಪ್ರಯಾಣಿಕರು ಜಲ ದಿಗ್ಬಂಧನಕ್ಕೆ ಒಳಗಾಗಿದ್ದು, ಪ್ರಯಾಣಿಕರ ರಕ್ಷಣೆಗೆ ಎನ್ಡಿಆರ್ಎಫ್ ತಂಡ, ಭಾರತೀಯ ಸೇನೆ ಹಾಗೂ ಭಾರತೀಯ ವಾಯು ಸೇನಾ ಪಡೆಯನ್ನು ನಿಯೋಜಿಸಲಾಗಿದೆ.
ರೈಲು ಪ್ರಯಾಣಿಕರನ್ನು ಏರ್ಲಿಫ್ಟ್ ಮೂಲಕ ಸುರಕ್ಷಿತವಾಗಿ ಕರೆದೊಯ್ಯುವ ಯೋಜನೆ ರೂಪಿಸಲಾಗಿತ್ತು. ಆದರೆ, ನಿರಂತರ ಮಳೆಯಿಂದಾಗಿ ಇದು ಅಸಾಧ್ಯವಾಗಿದೆ. ರೈಲಿನಲ್ಲಿರುವ ಪ್ರಯಾಣಿಕರಿಗೆ ನೆರವಾಗಲು ಬೋಟ್ಗಳ ಮೂಲಕ ಸ್ಥಳಕ್ಕೆ ಧಾವಿಸಲಾಗುತ್ತಿದೆ. ಸ್ಥಳಕ್ಕೆ ತೆರಳಿರುವ ಆರ್ಪಿಎಫ್ ಹಾಗೂ ಸಿಟಿ ಪೊಲೀಸರು ಪ್ರಯಾಣಿಕರಿಗೆ ಬಿಸ್ಕಿಟ್ ಹಾಗೂ ನೀರನ್ನು ವಿತರಿಸಿದ್ದಾರೆ.
ರೈಲಿನಿಂದ ಕೆಳಗೆ ಇಳಿಯಬೇಡಿ. ರೈಲು ಸುರಕ್ಷಿತ ಸ್ಥಳದಲ್ಲಿದೆ.ಎನ್ಡಿಆರ್ಎಫ್ ಹಾಗೂ ಇತರ ವಿಪತ್ತು ನಿರ್ವಹಣಾ ತಂಡಗಳ ಸಲಹೆ ಕೇಳಿ ಎಂದು ಸೆಂಟ್ರಲ್ ರೈಲ್ವೆ ಪ್ರಯಾಣಿಕರಿಗೆ ವಿನಂತಿಸಿದೆ.