ಶೋಪಿಯಾನ್ ನಲ್ಲಿ ಎನ್ಕೌಂಟರ್: ಇಬ್ಬರು ಉಗ್ರರು ಹತ

ಶ್ರೀನಗರ, ಜು. 27: ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್ಕೌಂಟರ್ನಲ್ಲಿ ಜೈಶೆ ಮುಹಮ್ಮದ್ನ ಕಮಾಂಡರ್ ಸಹಿತ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ವಕ್ತಾರ ತಿಳಿಸಿದ್ದಾರೆ.
ಹತನಾದ ಜೈಶೆ ಕಮಾಂಡರ್ನನ್ನು ಮುನ್ನಾ ಲಾಹೋರಿ ಎಂದು ಗುರುತಿಸಲಾಗಿದೆ. ಪಾಕಿಸ್ತಾನದ ನಿವಾಸಿಯಾಗಿದ್ದ ಈತ ಸುಧಾರಿತ ಸ್ಫೋಟಕ ತಯಾರಿಸುವಲ್ಲಿ ಪರಿಣತನಾಗಿದ್ದ. ಕಾಶ್ಮೀರದಲ್ಲಿ ನಾಗರಿಕರ ಸರಣಿ ಹತ್ಯೆಗೆ ಈತ ಕಾರಣನಾಗಿದ್ದ. ಹತನಾದ ಇನ್ನೋರ್ವ ಉಗ್ರನನ್ನು ಝೀನತ್ ಉಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಈತ ಕೂಡ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆ ಸದಸ್ಯ ಎಂದು ಅವರು ತಿಳಿಸಿದ್ದಾರೆ.
ಈ ವಲಯದಲ್ಲಿ ಭಯೋತ್ಪಾದಕರ ನೇಮಕಕ್ಕೆ ಭಯೋತ್ಪಾದಕ ಸಂಘಟನೆಗಳು ಲಾಹೋರಿಯನ್ನು ಬಳಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷ ಮಾರ್ಚ್ 30ರಂದು ಬನಿಹಾಲ್ನಲ್ಲಿ ನಡೆದ ಕಾರು ಬಾಂಬ್ ಸ್ಫೋಟಕ್ಕೆ ಲಾಹೋರಿ ಕಾರಣನಾಗಿದ್ದ. ಇಬ್ಬರು ನಾಗರಿಕರು ಗಾಯಗೊಳ್ಳಲು ಕಾರಣವಾಗಿದ್ದ ಜೂನ್ 17ರಂದು ಪುಲ್ವಾಮದಲ್ಲಿ ಸಂಭವಿಸಿದ ಕಾರು ಬಾಂಬ್ ಸ್ಫೋಟದ ಸಂಚಿನಲ್ಲಿ ಕೂಡ ಈತ ಪಾಲ್ಗೊಂಡಿದ್ದ.
ಮುನ್ನಾ ಲಾಹೋರಿಗೆ ಸುಧಾರಿತ ಸ್ಫೋಟಕ ತಯಾರಿಸಲು ತಿಳಿದಿತ್ತು. ಅಲ್ಲದೆ, ಈತ ಈ ಪ್ರದೇಶದಲ್ಲಿ ನಾಗರಿಕರ ಹತ್ಯೆಯ ರೂವಾರಿಯಾಗಿದ್ದ ಎಂದು ಅವರು ತಿಳಿಸಿದ್ದಾರೆ.