ವಿಧಾನಸಭಾ ಅಧಿವೇಶನ ಹಿನ್ನೆಲೆ: 2 ದಿನ ನಿಷೇಧಾಜ್ಞೆ ಜಾರಿ
![ವಿಧಾನಸಭಾ ಅಧಿವೇಶನ ಹಿನ್ನೆಲೆ: 2 ದಿನ ನಿಷೇಧಾಜ್ಞೆ ಜಾರಿ ವಿಧಾನಸಭಾ ಅಧಿವೇಶನ ಹಿನ್ನೆಲೆ: 2 ದಿನ ನಿಷೇಧಾಜ್ಞೆ ಜಾರಿ](https://www.varthabharati.in/sites/default/files/images/articles/2019/07/27/202475-1564230619.jpg)
ಬೆಂಗಳೂರು, ಜು.27: ವಿಧಾನಸಭಾ ಅಧಿವೇಶನದ ಹಿನ್ನೆಲೆ ವಿಧಾನಸೌಧ ಕಟ್ಟಡದ ಸುತ್ತಲೂ 2 ಕಿ.ಮೀ ವ್ಯಾಪ್ತಿಯಲ್ಲಿ ಜು.29ರಿಂದ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಆದೇಶಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲೆಂದು ಐಪಿಸಿ 144ನೆ ಸೆಕ್ಷನ್ ಜಾರಿ ಮಾಡಿದ್ದು, ಎರಡು ದಿನ ನಿಷೇಧಾಜ್ಞೆ ಹಾಕಿದ್ದೇವೆ. ಕಾನೂನು ಭಂಗ ಮಾಡುವವರು ಯಾರೇ ಆಗಿದ್ದರೂ ಬಿಡುವುದಿಲ್ಲ. ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ(ಜು.29) ಬೆಳಗ್ಗೆ 6ರಿಂದ ಜು.30ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮೆರವಣಿಗೆ, ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಮಾರಕಾಸ್ತ್ರ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.
ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನ ಸೌಧದ ಒಳಗಡೆ ಮತ್ತು ಹೊರಗಡೆ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ನಿಷೇಧಾಜ್ಞೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಜನ ಗುಂಪು ಸೇರುವುದು ನಿಷೇಧವಿದೆ ಎಂದು ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.