ಬಿಜೆಪಿಯ ವಾಮಮಾರ್ಗದಿಂದ ರಾಜ್ಯ ಸರಕಾರ ಪತನ: ಯೋಗೀಶ್ ಶೆಟ್ಟಿ

ಉಡುಪಿ, ಜು.27: ಉಡುಪಿ ಜಿಲ್ಲಾ ಜಾತ್ಯಾತೀತ ಜನತಾದಳ ಪಕ್ಷದ ಸಭೆ ಇಂದು ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗೀಶ್ ಶೆಟ್ಟಿ, ಕುಮಾರಸ್ವಾಮಿಯ ಜನಪರವಾದ ಸರಕಾರವನ್ನು ಬಿಜೆಪಿಯವರು ವಾಮಮಾರ್ಗದಿಂದ ಕೆಳಗೆ ಉರುಳಿದ್ದಾರೆಯೇ ಹೊರತು ಕರ್ನಾಟಕದ ಜನರ ಮನಸ್ಸಿನಿಂದ ಅಲ್ಲ. ಕುಮಾರಸ್ವಾಮಿ ಅವರು ಕೇವಲ 14 ತಿಂಗಳ ಅವಧಿಯಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಧಾರಗಳು ಜನಸಾಮಾನ್ಯರ ಮನಸ್ಸಿನಲ್ಲಿ ಸದಾ ಉಳಿಯುತ್ತದೆ ಎಂದು ಹೇಳಿದರು.
ಕುಮಾರಸ್ವಾಮಿ ಅವರ ಜನಪರ ಕೆಲಸಗಳೇ ನಮಗೆ ಶ್ರೀರಕ್ಷೆ. ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿ ಗೆಡಬಾರದು. ಅಧಿಕಾರ ಶಾಶ್ವತ ಅಲ್ಲ. ಅದು ಬರುತ್ತದೆ ಹೋಗುತ್ತದೆ, ಆದರೆ ಪಕ್ಷದ ಸಂಘಟನೆ ಮುಖ್ಯ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕು ಎಂದು ಅವರು ತಿಳಿಸಿದರು.
ಕಾರ್ಯಾಧ್ಯಕ್ಷ ವಾಸುದೇವ ರಾವ್ ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷವನ್ನು ಬೂತ್ಮಟ್ಟದಲ್ಲಿ ಸಂಘಟಿಸಿ ಮುಂದೆ ಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.
ಯುವ ಜನತಾದಳ ನಾಯಕರು, ಹಲವು ಘಟಕದ ನಾಯಕರು ಸಹಿತ ಪಕ್ಷದ ವಿವಿಧ ಮುಖಂಡರು ಚರ್ಚೆಯಲ್ಲಿ ಭಾಗವಹಿದರು. ಪ್ರದಾನ ಕಾರ್ಯ ದರ್ಶಿ ಜಯರಾಮ ಆಚಾರ್ಯ ವಂದಿಸಿದರು.







