ಚೂರಿಯಿಂದ ಇರಿದು ಪೊಲೀಸ್ ಪೇದೆಯ ಹತ್ಯೆ

ಹೊಸದಿಲ್ಲಿ, ಜು.27: ಪೊಲೀಸ್ ಪೇದೆಯನ್ನು ಏಳರಿಂದ ಎಂಟು ಮಂದಿಯಿದ್ದ ತಂಡ ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ಶುಕ್ರವಾರ ರಾತ್ರಿ ರಾಜಸ್ತಾನದ ಟೊಂಕ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಕೇಶ್ ಚೌದರಿ ಎಂಬ ಪೊಲೀಸ್ ಪೇದೆಯನ್ನು ಟೊಂಕ್ನ ಮಹಂಡ್ವಾಸ್ ಪ್ರದೇಶದಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜಸ್ತಾನದಲ್ಲಿ ಎರಡ ವಾರದಲ್ಲಿ ಗುಂಪಿನಿಂದ ಪೊಲೀಸ್ ಸಿಬ್ಬಂದಿಯನ್ನು ಹತ್ಯೆಗೈದ ಎರಡನೇ ಘಟನೆ ಇದಾಗಿದೆ.
ಆರೋಪಿಗಳ ಪೈಕಿ ನಾಲ್ವರನ್ನು ಗುರುತಿಸಲಾಗಿದ್ದು ಅವರನ್ನು, ಸೀತಾರಾಮ ಯಾದವ್, ರಜ್ರಾಜ ಯಾದವ್, ಬಾಬುಲಾಲ್ ಜಟ್ ಮತ್ತು ಪೊಕರ್ ಮಾಲಿ ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 13ರಂದು ರಾಜಸ್ತಾನದ ರಜ್ಸಮಂಡ್ ಪ್ರದೇಶದಲ್ಲಿ ಅಬ್ದುಲ್ ಗನಿ ಹೆಸರಿನ ಪೊಲೀಸ್ ಮುಖ್ಯ ಪೇದೆಯನ್ನು ಗುಂಪೊಂದು ಹತ್ಯೆಗೈದಿತ್ತು. ಅವರು ಜಮೀನಿಗೆ ಸಂಬಂಧಪಟ್ಟ ವಿವಾದದ ಇತ್ಯಾರ್ಥಕ್ಕೆ ತೆರಳಿದ್ದ ಸಂದರ್ಭದಲ್ಲಿ ವಾಗ್ವಾದ ನಡೆದು ಗುಂಪೊಂದು ಗನಿ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಬ್ದುಲ್ ಗನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.