ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ರಕ್ಷಣೆ: ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಜು.27: ದೇಶಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ರಕ್ಷಣೆ ಮತ್ತು ಸುರಕ್ಷತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ತಳ್ಳಿಹಾಕಿದೆ. ಮನವಿದಾರರ ಪರ ವಕೀಲರನ್ನು ಆಲಿಸಿದ ಮತ್ತು ಅದಕ್ಕೆ ಸಂಬಂಧಿಸಿದ ವಿಷಯವನ್ನು ಗಮನಿಸಿದ ನಂತರ ಈ ಮನವಿಯನ್ನು ಪುರಸ್ಕರಿಸಲು ನಾವು ಸಿದ್ಧರಿಲ್ಲ ಹಾಗಾಗಿ ಈ ಮನವಿಯನ್ನು ತಿರಸ್ಕರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಬಾಕಿಯುಳಿದ ಇತರ ಅರ್ಜಿಗಳನ್ನೂ ತಿರಸ್ಕೃತ ಎಂದು ತಿಳಿಯಬೇಕು ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಮತ್ತು ನ್ಯಾಯಾಧೀಶ ದೀಪಕ್ ಗುಪ್ತಾ ಅವರ ಪೀಠ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ರೋಗಿಯ ಸಂಬಂಧಿಗಳು ವೈದ್ಯರ ಮೇಲೆ ಹಲ್ಲೆ ನಡೆಸಿದ ಕಾರಣ ವೈದ್ಯರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ನ್ಯಾಯವಾದಿ ಅಲಕ್ ಅಲೋಕ್ ಶ್ರೀವಾಸ್ತವ ಅವರು ಈ ಮನವಿಯನ್ನು ಸಲ್ಲಿಸಿದ್ದರು. ತನ್ನ ಅರ್ಜಿಯಲ್ಲಿ ಮನವಿದಾರರು, ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಪ್ರಕಾರ ದೇಶಾದ್ಯಂತ ಶೇ.75ಕ್ಕೂ ಅಧಿಕ ವೈದ್ಯರು ಒಂದಿಲ್ಲೊಂದು ರೀತಿಯ ಹಿಂಸೆಯನ್ನು ಎದುರಿಸಿದ್ದಾರೆ ಮತ್ತು ಇವುಗಳಲ್ಲಿ ಶೇ.50 ಘಟನೆಗಳು ತೀವ್ರ ನಿಗಾ ಘಟಕಗಳಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ ಇದನ್ನು ಒಪ್ಪಲು ನಾವು ಸಿದ್ಧರಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.