ಮಕ್ಕಳ ಸಾವಿನ ಪ್ರಕರಣ: ಅಸಾರಾಂ, ಪುತ್ರನಿಗೆ ಕ್ಲೀನ್ ಚಿಟ್

ಗಾಂಧಿನಗರ, ಜು.27: ವಿವಾದಾತ್ಮಕ ದೇವಮಾನವ ಅಸಾರಾಂ ಒಡೆತನದ ಅಹಮದಾಬಾದ್ ವಸತಿ ಶಾಲೆಯಲ್ಲಿ 2008ರ ಜುಲೈಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಪ್ರಕರಣದ ತನಿಖೆ ನಡೆಸಿದ ನ್ಯಾಯಾಧೀಶ ಡಿಕೆ ತ್ರಿವೇದಿ ಆಯೋಗವು ಅಸಾರಾಂ ಹಾಗೂ ಆತನ ಪುತ್ರನಿಗೆ ಕ್ಲೀನ್ಚಿಟ್ ನೀಡಿದೆ. ಆಯೋಗವು 2013ರಲ್ಲಿ ಗುಜರಾತ್ ಸರಕಾರಕ್ಕೆ ನೀಡಿದ್ದ ವರದಿಯನ್ನು ಶುಕ್ರವಾರ ವಿಧಾನಸಭೆಯಲ್ಲಿ ಸಲ್ಲಿಸಲಾಗಿದೆ. ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಈ ದುರ್ಘಟನೆಗೆ ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ.
2008ರ ಜುಲೈ 5ರಂದು ಅಹಮದಾಬಾದ್ನ ಮೊಟೆರಾ ಪ್ರದೇಶದಲ್ಲಿರುವ ಅಸಾರಾಂ ಮಾಲಕತ್ವದ ಗುರುಕುಲ ವಸತಿ ಶಾಲೆಯ ವಿದ್ಯಾರ್ಥಿಗಳಾದ ದೀಪೇಶ್ ವೇಲಾ (10 ವರ್ಷ) ಮತ್ತು ಅಭಿಷೇಕ್ ವೇಲಾ(11 ವರ್ಷ) ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದು ಎರಡು ದಿನದ ಬಳಿಕ ಅವರ ಮೃತದೇಹವು ಸಾಬರ್ಮತಿ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಸಾರಾಂ ಮತ್ತು ಆತನ ಪುತ್ರ ವಾಮಾಚಾರಕ್ಕೆ ಈ ಮಕ್ಕಳನ್ನು ಬಲಿ ಕೊಟ್ಟಿದ್ದಾರೆ ಎಂದು ಮಕ್ಕಳ ಪೋಷಕರು ದೂರು ನೀಡಿದ್ದರು.
ಅಸಾರಾಮ್ ಮತ್ತು ಆತನ ಪುತ್ರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂಸಾತ್ಮಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ 2008ರಲ್ಲಿ ಈ ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಾಧೀಶ ತ್ರಿವೇದಿ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು.
ವಾಮಾಚಾರ ನಡೆಸಿರುವ ಆರೋಪವನ್ನು ದೃಢಪಡಿಸುವ ಯಾವುದೇ ಪುರಾವೆ ದೊರೆತಿಲ್ಲ. ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಿದೆ. ಅಲ್ಲದೆ ವಾಮಾಚಾರ ನಡೆಸಿ ಮಕ್ಕಳ ಕೆಲವು ಅಂಗಗಳನ್ನು ಕತ್ತರಿಸಿದ್ದಾರೆ ಎಂಬ ಆರೋಪವನ್ನು ಸಮರ್ಥಿಸುವ ಯಾವುದೇ ಸಾಕ್ಷಿ ದೊರೆತಿಲ್ಲ. ಆದರೆ ಮಕ್ಕಳು ನಾಪತ್ತೆಯಾಗಲು ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ ಕಾರಣ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.