ಮಾರ್ಗ ಬದಲಿಸಿ ಹೊರಟ ಸಿಎಂ: ತವರಿನ ಜನರಿಂದ ಅದ್ಧೂರಿ ಸ್ವಾಗತ
ಮಂಡ್ಯ, ಜು.27: ಇಲ್ಲಿಗೆ ಸಮೀಪದ ತೂಬಿನಕೆರೆ ಹೆಲಿಪ್ಯಾಡ್ನಿಂದ ತವರು ಗ್ರಾಮ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಗೆ ತೆರಳಲು ಪೊಲೀಸರು ಗೊತ್ತು ಮಾಡಿದ್ದ ಮಾರ್ಗ ಬದಲಿಸಿದ ಸಿಎಂ ಯಡಿಯೂರಪ್ಪ ಬೇರೆ ಮಾರ್ಗದ ಮೂಲಕ ತೆರಳಿದರು.
ಬೆಳಗ್ಗೆ 13.30ರ ವೇಳೆಗೆ ತೂಬಿನಕೆರೆ ಹೆಲಿಪ್ಯಾಡ್ಗೆ ಬಂದಿಳಿದ ಯಡಿಯೂರಪ್ಪ ಅವರನ್ನು ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಎಸ್ಪಿ ಶಿವಪ್ರಕಾಶ್ ದೇವರಾಜ್, ಅಧಿಕಾರಿ ವರ್ಗ ಸ್ವಾಗತ ಕೋರಿತು.
ಬೆಂಗಳೂರು-ಮೈಸೂರು ಹೆದ್ದಾರಿಯ ಶ್ರೀರಂಗಪಟ್ಟಣ ಮಾರ್ಗದ ಮೂಲಕ ಕೆ.ಅರ್.ಪೇಟೆಗೆ ಪೊಲೀಸರು ಮಾರ್ಗ ನಿಗದಿ ಮಾಡಿದ್ದರು. ಆದರೆ, ಸಿಎಂ ಶಾರ್ಟ್ಕಟ್ ಮಾರ್ಗ ಅನುಸರಿಸಿದರು. ದೂರದ ಮಾರ್ಗ ನಿಗದಿ ಮಾಡಿದ್ದ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರಿಗೆ ಗದರಿದ ಯಡಿಯೂರಪ್ಪ, ಬ್ಯಾಡರಹಳ್ಳಿ, ಪಾಂಡವಪುರ, ಚಿನಕುರಳಿ ಮಾರ್ಗವಾಗಿ ಬೂಕನಕೆರೆಗೆ ತೆರಳಿದರು.
ಯಡಿಯೂರಪ್ಪ ತವರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಬೂಕನಕೆರೆ ಗ್ರಾಮವನ್ನು ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು.
ಮುಖ್ಯಮಂತ್ರಿಯಾಗಿರುವ ತವರಿನ ಪುತ್ರನನ್ನು ಕಾಣಲು ಸುತ್ತಮುತ್ತಲ ಗ್ರಾಮಗಳಿಂದ ಸಹಸ್ರಾರು ಜನರು, ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೆರೆದಿದ್ದರು.