ಭಯ ಉಂಟು ಮಾಡುವುದು ಜೋತಿಷ್ಯವಲ್ಲ: ಡಾ.ಪಾರ್ಥಸಾರಥಿ
ಬೆಂಗಳೂರು, ಜು.28: ಯಾವುದು ಭಯ ಉಂಟು ಮಾಡುತ್ತದೋ ಅದನ್ನು ಜೋತಿಷ್ಯ, ವಾಸ್ತು ಎಂದು ಪರಿಗಣಿಸುವುದಿಲ್ಲ ಎಂದು ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ ಅಭಿಪ್ರಾಯಪಟ್ಟರು.
ರವಿವಾರ ಗಾಂಧಿ ಬಜಾರ್ನ ಎಚ್.ಬಿ.ಸಮಾಜ ಸಭಾಂಗಣದಲ್ಲಿ ಪ್ರಣವ ನಮನದವರು ಆಯೋಜಿಸಿದ್ದ ವಾಸ್ತು ಹೀಲಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೋತಿಷ್ಯ, ವಾಸ್ತು ಎಂಬುವುದೇ ನಂಬಿಕೆಯ ವಿಷಯವಾಗಿದ್ದು, ವಾಸ್ತುವಿನ ಪ್ರಭಾವ ಮನೆಯಿಂದ ಮನಗಳ ಮೇಲೂ ಆಗುತ್ತದೆ ಎಂದು ಹೇಳಿದರು.
ಇತ್ತೀಚೆಗೆ ವಾಸ್ತುಶಾಸ್ತ್ರವನ್ನು ಹೇಳಲು ತಂತ್ರಜ್ಞಾನವು ಬಹಳ ಉಪಯೋಗ ಆಗುತ್ತಿದ್ದು, ಅದರ ಅರಿವು ಇರಬೇಕು. ವಾಸ್ತುವಿನ ವಿಷಯವನ್ನು ಎಷ್ಟು ತಿಳಿಸಿದರೂ ಕಡಿಮೆಯೇ, ವಸ್ತುವಲ್ಲ ಅದು ವಾಸ್ತು, ಆಧುನಿಕ ಕಾಲಘಟ್ಟಕ್ಕೆ ಹೊಂದುವಂತಹ ಅಂಶಗಳನ್ನು ಅಳವಡಿಕೆ ಮಾಡಿಕೊಂಡು ವೈಜ್ಞಾನಿಕ ರೀತಿಯಲ್ಲಿ ವಾಸ್ತು ಹೇಳಬೇಕು ಎಂದು ತಿಳಿಸಿದರು.
ವಾಸ್ತುಶಾಸ್ತ್ರ ಹರಪ್ಪ, ಮೆಹೆಂಜೋದಾರೋ ನಾಗರಿಕತೆಗಳ ಕಾಲದಿಂದಲೂ ವಾಸ್ತುಶಾಸ್ತ್ರ ಬಂದಿದ್ದು, ತಮಿಳುನಾಡಿನ ಬೃಹದೇಶ್ವರ ದೇವಾಲಯ ಇನ್ನೂ ಗಟ್ಟಿಯಾಗಿ ಇರಲು ಕಾರಣ, ನಮ್ಮ ದೇಶದ ವಾಸ್ತುವಿನ ಕೊಡುಗೆಯಾಗಿದೆ. ಅಲ್ಲದೆ, ರಾಮೇಶ್ವರಂ ದೇವಾಲಯದ ನಿರ್ಮಾಣ ಆಧುನಿಕ ತಂತ್ರಜ್ಞಾನವನ್ನೂ ಮೀರಿದಾಗಿದೆ. ಏಕೆಂದರೆ ಅದರ ನಿರ್ಮಾಣದಲ್ಲಿ ವಾಸ್ತು ವಿಷಯವೂ ಅಗಾಧ ಮಟ್ಟದಲ್ಲಿ ಪ್ರತಿ ಬಿಂಬಿತವಾಗಿದೆ ಎಂದು ಹೇಳಿದರು.
ವಿದೇಶಿಗರು ವಾಸ್ತುವಿನ ಕಡೆ ಓಲವು ತೋರಿರುವುದು ಅದರ ಶ್ರೇಷ್ಠತೆಯನ್ನು ಸಾರಿಹೇಳುತ್ತದೆ. ವಾಸ್ತು ಕೇವಲ ಶಾಸ್ತ್ರವಲ್ಲ. ಅದು ಒಂದು ವಿಜ್ಞಾನವೂ ಹೌದು.
- ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ, ವಿದ್ವಾಂಸ