ಮೌಲ್ಯಾಂಕನ ಸಮಿತಿಯು ವಿತ್ತ ಸಚಿವಾಲಯ ಮತ್ತು ನೀತಿ ಆಯೋಗದ ಸಲಹೆಗಳನ್ನು ಕಡೆಗಣಿಸಿತ್ತು:ವರದಿ
ವಿಮಾನ ನಿಲ್ದಾಣಗಳ ಖಾಸಗೀಕರಣ

ಹೊಸದಿಲ್ಲಿ,ಜು.28: ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕಾಗಿ ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ನೀತಿ ಆಯೋಗ ನಿಗದಿಪಡಿಸಿದ್ದ ಮಾರ್ಗಸೂಚಿಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮೌಲ್ಯಾಂಕನ ಸಮಿತಿಯು ಕಡೆಗಣಿಸಿತ್ತು ಮತ್ತು ಇದರಿಂದಾಗಿ ಅದಾನಿ ಎಂಟರ್ಪ್ರೈಸಸ್ ಎಲ್ಲ ಆರೂ ವಿಮಾನ ನಿಲ್ದಾಣಗಳ ಟೆಂಡರ್ಗಳನ್ನು ಗೆಲ್ಲುವಂತಾಯಿತು ಎಂದು ಆಂಗ್ಲ ದೈನಿಕವೊಂದು ತನ್ನ ವರದಿಯಲ್ಲಿ ಹೇಳಿದೆ.
ಒಬ್ಬ ಬಿಡ್ಡರ್ಗೆ ಎರಡಕ್ಕಿಂತ ಹೆಚ್ಚಿನ ವಿಮಾನ ನಿಲ್ದಾಣಗಳನ್ನು ಒಪ್ಪಿಸುವಂತಿಲ್ಲ ಎಂಬ ಶಿಫಾರಸನ್ನು ಮತ್ತು ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ಅನುಭವ ಹೊಂದಿರುವ ಮತ್ತು ಆರ್ಥಿಕ ಕ್ಷಮತೆಯನ್ನು ಹೊಂದಿರುವ ಕಂಪನಿಗಳಿಗೆ ಗುತ್ತಿಗೆಗಳನ್ನು ನೀಡುವ ಅಗತ್ಯವನ್ನು ಸಮಿತಿಯು ಕಡೆಗಣಿಸಿದೆ ಎಂದು ಅದು ಬೆಟ್ಟು ಮಾಡಿದೆ.
ಕೇಂದ್ರ ಸರಕಾರವು 2018 ನವೆಂಬರ್ನಲ್ಲಿ ಅಹ್ಮದಾಬಾದ್,ಜೈಪುರ,ಲಕ್ನೋ,ಗುವಾಹಟಿ,ತಿರುವನಂತಪುರ ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ತನ್ನ ಒಪ್ಪಿಗೆಯನ್ನು ನೀಡಿತ್ತು. ಅಂತಿಮ ಒಪ್ಪಿಗೆಗಾಗಿ ಪ್ರಸ್ತಾವವನ್ನು ಶಿಫಾರಸು ಮಾಡಲು ಮೌಲ್ಯಾಂಕನ ಸಮಿತಿಯು ಡಿ.11ರಂದು ಸಭೆ ಸೇರಿತ್ತು ಮತ್ತು ಮೂರು ದಿನಗಳ ಬಳಿಕ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ)ವು ಟೆಂಡರ್ಗಳನ್ನು ಕರೆದಿತ್ತು.
ಅದಾನಿ ಎಂಟರ್ಪ್ರೈಸಸ್ ಎಲ್ಲ ಆರೂ ವಿಮಾನ ನಿಲ್ದಾಣಗಳನ್ನು ನಿರ್ವಹಿಸಲು ಟೆಂಡರ್ಗಳನ್ನು ಗೆದ್ದಿದೆ ಎಂದು ಎಎಐ ಫೆಬ್ರವರಿಯಲ್ಲಿ ತಿಳಿಸಿತ್ತು. ಅಹ್ಮದಾಬಾದ್,ಲಕ್ನೋ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ಅದಾನಿ ಸಮೂಹಕ್ಕೆ ಲೀಸ್ಗೆ ನೀಡುವುದಕ್ಕೆ ಜುಲೈ 3 ರಂದು ಹಸಿರು ನಿಶಾನೆಯನ್ನು ತೋರಿಸಿರುವ ಕೇಂದ್ರ ಸಂಪುಟವು ಇನ್ನುಳಿದ ಮೂರು ವಿಮಾನ ನಿಲ್ದಾಣಗಳ ಲೀಸ್ಗೆ ಇನ್ನಷ್ಟೇ ಒಪ್ಪಿಗೆಯನ್ನು ನೀಡಬೇಕಿದೆ.
ಈ ಆರು ಯೋಜನೆಗಳು ಬಂಡವಾಳ ಪ್ರಧಾನವಾಗಿವೆ ಮತ್ತು ಅವುಗಳನ್ನು ಬೇರೆ ಬೇರೆ ಕಂಪನಿಗಳಿಗೆ ನೀಡಿದರೆ ಸ್ಪರ್ಧಾತ್ಮಕತೆಗೆ ಪೂರಕವಾಗುತ್ತದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆಯು ಸಮಿತಿಗೆ ಸಲ್ಲಿಸಿದ್ದ ಟಪ್ಪಣಿಯಲ್ಲಿ ಸೂಚಿಸಿತ್ತು. ಆದರೆ ಒಂದೇ ಕಂಪನಿಗೆ ಲೀಸ್ಗೆ ನೀಡಬಹುದಾದ ವಿಮಾನ ನಿಲ್ದಾಣಗಳ ಸಂಖ್ಯೆಯ ಮೇಲೆ ಮಿತಿಯನ್ನು ಹೇರುವ ಅಗತ್ಯವಿಲ್ಲ ಎಂಬ ಕಾರ್ಯದರ್ಶಿಗಳ ಉನ್ನತಾಧಿಕಾರ ಸಮಿತಿಯು ಕೈಗೊಂಡಿದ್ದ ನಿರ್ಣಯವನ್ನು ವೌಲ್ಯಾಂಕನ ಸಮಿತಿಯು ಉಲ್ಲೇಖಿಸಿತ್ತು. ಇದು ಸಮಿತಿಯ 85ನೇ ಸಭೆಯ ಚರ್ಚೆ ದಾಖಲೆಗಳಲ್ಲಿ ನಮೂದಾಗಿದೆ ಎಂದು ವರದಿಯು ತಿಳಿಸಿದೆ.
ಬಿಡ್ಡರ್ಗಳು ವಿಮಾನ ನಿಲ್ದಾಣಗಳನ್ನು ನಿರ್ವಹಿಸಿದ ಅನುಭವ ಹೊಂದಿರಬೇಕು ಎಂದು ನೀತಿ ಆಯೋಗವು ಪ್ರತ್ಯೇಕ ಟಿಪ್ಪಣಿಯಲ್ಲಿ ಸೂಚಿಸಿತ್ತು. ಇದಕ್ಕೂ ಮೌಲ್ಯಾಂಕನ ಸಮಿತಿಯು,ಇಂತಹ ಅನುಭವವನ್ನು ಟೆಂಡರ್ಗೆ ಪೂರ್ವಭಾವಿ ಅಥವಾ ನಂತರದ ಅಗತ್ಯವನ್ನಾಗಿಸಬೇಕಿಲ್ಲ ಎಂದ ಉನ್ನತಾಧಿಕಾರ ಸಮಿತಿಯ ಇನ್ನೊಂದು ನಿರ್ಧಾರವನ್ನು ಉಲ್ಲೇಖಿಸಿತ್ತು ಎಂದೂ ವರದಿಯು ತಿಳಿಸಿದೆ.