ನ್ಯಾಯಾಲಯ ಪ್ರಕರಣಗಳ ಶೀಘ್ರ ಇತ್ಯರ್ಥ ಅಗತ್ಯ: ಸುಪ್ರೀಂಕೋರ್ಟ್ ನ್ಯಾಯಾಧೀಶ ಸುಭಾಷ್ ರೆಡ್ಡಿ

ಹೈದರಾಬಾದ್, ಜು.28: ಪ್ರಕರಣಗಳ ಇತ್ಯರ್ಥದಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಗಮನ ಹರಿಸಿ ಶೀಘ್ರ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ತಮ್ಮ ಓದುವ ಅಭ್ಯಾಸವನ್ನು ಸುಧಾರಿಸಬೇಕಾಗಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶ ಆರ್ ಸುಭಾಷ್ ರೆಡ್ಡಿ ಹೇಳಿದ್ದಾರೆ. ಸಿಟಿ ಸಿವಿಲ್ ಕೋರ್ಟ್ನ ಸಂಕೀರ್ಣದ ದ್ವಿತೀಯ ಹಂತದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸುಪ್ರೀಂಕೋರ್ಟ್ನ ನ್ಯಾಯಾಧೀಶ ಎನ್ವಿ ರಮಣ ಉದ್ಘಾಟಿಸಿದರು. ಪ್ರಕರಣ ಶೀಘ್ರ ಇತ್ಯರ್ಥವಾಗಬೇಕು ಎಂಬುದು ಅರ್ಜಿ ಸಲ್ಲಿಸುವವರ ಆಶಯವಾಗಿರುತ್ತದೆ. ನಮ್ಮ ಆಂತರಿಕ ಸಮಸ್ಯೆ ಪ್ರಕರಣಗಳ ಶೀಘ್ರ ವಿಲೇವಾರಿಗೆ ಅಡ್ಡಿಯಾಗಬಾರದು. ಈ ನಿಟ್ಟಿನಲ್ಲಿ ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಪ್ರಕರಣದ ದಾಖಲೆಪತ್ರಗಳನ್ನು ಮೊದಲೇ ಕೂಲಂಕುಷವಾಗಿ ಅಧ್ಯಯನ ನಡೆಸಿದರೆ ವಿಳಂಬವನ್ನು ತಡೆಯಬಹುದು ಎಂದು ನ್ಯಾ. ರೆಡ್ಡಿ ಹೇಳಿದರು.
ಹೊಸದಾಗಿ ನೇಮಕಗೊಂಡಿರುವ ನ್ಯಾಯಾಂಗ ಅಧಿಕಾರಿಗಳು ಹಿರಿಯ ಸದಸ್ಯರಿಗೆ ಸೂಕ್ತ ಗೌರವ ನೀಡುತ್ತಿಲ್ಲ ಎಂದ ಅವರು, ಬಾರ್ ಕೌನ್ಸಿಲ್ನ ಸದಸ್ಯರು ‘ಲಕ್ಷ್ಮಣ ರೇಖೆ’ಯನ್ನು ದಾಟಬಾರದು ಎಂದು ಎಚ್ಚರಿಸಿದರು.