ಪಾಂಝಿ ಯೋಜನೆಗಳನ್ನು ತಡೆಯಲು ಮಸೂದೆಗೆ ಸಂಸತ್ತಿನ ಅಂಗೀಕಾರ

ಹೊಸದಿಲ್ಲಿ,ಜು.29: ಸಂಸತ್ತು ಸೋಮವಾರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮಸೂದೆ,2019ನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಇದರೊಂದಿಗೆ ವಂಚಕ ಯೋಜನೆಗಳಲ್ಲಿ ಹಣ ತೊಡಗಿಸಿ ಮೋಸ ಹೋಗುವ ಬಡ ಹೂಡಿಕೆದಾರರು ತಮ್ಮ ಹಣವನ್ನು ಮರಳಿ ಪಡೆಯುವುದು ಸಾಧ್ಯವಾಗಲಿದೆ.
ರಾಜ್ಯಸಭೆಯು ಸೋಮವಾರ ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಿತು. ಲೋಕಸಭೆಯು ಜು.24ರಂದೇ ಮಸೂದೆಗೆ ಅಂಗೀಕಾರದ ಮುದ್ರೆಯೊತ್ತಿತ್ತು. ಮಸೂದೆಯು ಈ ಸಂಬಂಧ ಹಿಂದೆ ಹೊರಡಿಸಲಾಗಿದ್ದ ಅಧ್ಯಾದೇಶವನ್ನು ತೆರವುಗೊಳಿಸಲಿದೆ.
ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸಿದ ಸಹಾಯಕ ವಿತ್ತಸಚಿವ ಅನುರಾಗ ಸಿಂಗ್ ಠಾಕೂರ್ ಅವರು,ಮಸೂದೆಯು ಅಮಾಯಕ ಬಡಜನರ ಕಠಿಣ ದುಡಿಮೆಯ ಹಣವನ್ನು ರಕ್ಷಿಸಲಿದೆ ಎಂದು ಹೇಳಿದರು.
ಮಸೂದೆಯು ವಂಚಕ ಸಂಸ್ಥೆಗಳಿಂದ ವಶಪಡಿಸಿಕೊಳ್ಳಲಾಗುವ ಹಣದಲ್ಲಿ ಹೂಡಿಕೆದಾರರಿಗೆ ಮೊದಲ ಹಕ್ಕನ್ನು ಒದಗಿಸಿದೆ.
Next Story