ಬಿಜೆಪಿ ಅಲೆಗೆ ಪ್ರತಿಯಾಗಿ ಮಮತಾ ಬ್ಯಾನರ್ಜಿಯಿಂದ ‘ಒಂದು ಕರೆ’ ಅಭಿಯಾನ
ಏನಿದರ ವಿಶೇಷತೆ? : ಇಲ್ಲಿದೆ ಮಾಹಿತಿ

ಕೋಲ್ಕತಾ, ಜು.29: ಪಶ್ಚಿಮ ಬಂಗಾಳದಲ್ಲಿ ಹೆಚ್ಚುತ್ತಿರುವ ಬಿಜೆಪಿಯ ಜನಪ್ರಿಯತೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ‘ನನಗೊಂದು ಕರೆ ಮಾಡಿ’ ಅಭಿಯಾನವನ್ನು ಆರಂಭಿಸಿದ್ದಾರೆ.
ಅದಕ್ಕಾಗಿ ದೀದಿ ಕೆ ಬೋಲೊ (ಅಕ್ಕನಿಗೆ ಹೇಳಿ) ಎಂಬ ಹೆಸರಿನಲ್ಲಿ ಮೊಬೈಲ್ ಸಂಖ್ಯೆಯನ್ನು ಗೊತ್ತುಪಡಿಸಲಾಗಿದ್ದು ಆ ಮೂಲಕ ಬ್ಯಾನರ್ಜಿಯವರಲ್ಲಿ ನೇರವಾಗಿ ಮಾತನಾಡಬಹುದಾಗಿದೆ. “ಇದೇ ಹೆಸರಿನ ಜಾಲತಾಣವನ್ನೂ ನಿರ್ಮಿಸಲಾಗಿದ್ದು ನಿಮ್ಮ ಯೋಚನೆಗಳನ್ನು ಪೋಸ್ಟ್ ಮಾಡಿದರೆ ಮುಖ್ಯಮಂತ್ರಿಯೇ ನಿಮ್ಮನ್ನು ಸಂಪರ್ಕಿಸುವುದು ನಿಶ್ಚಿತ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮೊದಲ ಬಾರಿ ತೃಣಮೂಲ ಕಾಂಗ್ರೆಸ್ ಅದ್ಧೂರಿ ರೀತಿಯಲ್ಲಿ ನಡೆಸಿದ ದ್ವಿಭಾಷಾ ಪತ್ರಿಕಾಗೋಷ್ಟಿಯಲ್ಲಿ ಮಮತಾ ಬ್ಯಾನರ್ಜಿ ನೂತನ ಯೋಜನೆಯ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಇಷ್ಟೊಂದು ಅದ್ಧೂರಿ ರೀತಿಯಲ್ಲಿ ತಂತ್ರಜ್ಞಾನದ ಅನಾವರಣ ಮಾಡುವ ಹಿಂದಿನ ಉದ್ದೇಶದ ಬಗ್ಗೆ ಕೇಳಿದಾಗ, ಇತರ ಪಕ್ಷಗಳು ದತ್ತಾಂಶ ಮತ್ತು ಇತರ ಸಾಧನಗಳನ್ನು ಬಳಸುತ್ತಿರುವಾಗ ನಾವೂ ಜನರ ಜೊತೆ ಸಂಪರ್ಕ ಸಾಧಿಸಲು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
ಮುಂದಿನ ನೂರು ದಿನಗಳಲ್ಲಿ ಪಕ್ಷದ ಒಂದು ಸಾವಿರ ಚುನಾಯಿತ ಕಾರ್ಯಕರ್ತರು 10,000 ಗ್ರಾಮಗಳ ಬೂತ್ ಮಟ್ಟದ ಕಾರ್ಯಕರ್ತರನ್ನು, ಸಾಮಾನ್ಯ ಜನರನ್ನು ಮತ್ತು ಪ್ರತಿಷ್ಟಿತರನ್ನು ಭೇಟಿಯಾಗಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.