ಮತ್ತೋರ್ವ ಏಕಾಂಗಿ ಶಾಸಕನ ವಜಾಗೊಳಿಸಿದ ಬಿಎಸ್ಪಿ

ಮೇದಿನಿನಗರ, ಜು.29: ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಆರೋಪದಲ್ಲಿ ಜಾರ್ಖಂಡ್ನ ಏಕಮಾತ್ರ ಬಿಎಸ್ಪಿ ಶಾಸಕ ಕುಶ್ವಾಹ ಶಿವಪೂಜನ್ ಮೆಹ್ತಾ ಅವರನ್ನು ಪಕ್ಷದ ಜಾರ್ಖಂಡ್ ವಿಭಾಗ ಸೋಮವಾರ ವಜಾಗೊಳಿಸಿದೆ.
ಮೆಹ್ತಾ ಅವರು ತನ್ನ ವಿಧಾನಸಭಾ ಕ್ಷೇತ್ರ ಪಲಮು ಜಿಲ್ಲೆಯ ಹುಸೈನಾಬಾದನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆರೋಪವೂ ಇತ್ತು. ಆದರೆ ಈ ಆರೋಪವನ್ನು ಶಾಸಕ ನಿರಾಕರಿಸಿದ್ದು, ಈ ಆರೋಪದ ಬಗ್ಗೆ ಮಾಹಿತಿಯಿಲ್ಲ ಎಂದು ತಿಳಿಸಿದ್ದಾರೆ. ಮೆಹ್ತಾ ತನ್ನ ಕ್ಷೇತ್ರಕ್ಕೆ ಸಮಯ ನೀಡುತ್ತಿರಲಿಲ್ಲ. ಈ ಬಗ್ಗೆ ಜನರು ದೂರು ನೀಡಿದಾಗ ಅವರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಾಟಕ ಆಡುತ್ತಾರೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಸುಲಭ್ ದಾಸ್ ಆರೋಪಿಸಿದ್ದಾರೆ.
ತನ್ನ ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದರೂ ಅದನ್ನು ಪರಿಹರಿಸಲಾಗಿಲ್ಲ ಎಂದು ಆರೋಪಿಸಿ ಮೆಹ್ತಾ ಜುಲೈ 26ರಂದು ಸ್ಪೀಕರ್ ದಿನೇಶ್ ಒರವೊನ್ ಅವರಿಗೆ ತನ್ನ ರಾಜೀನಾಮೆ ಒಪ್ಪಿಸಿದ್ದರು. ಆದರೆ ಅವರ ರಾಜೀನಾಮೆಯನ್ನು ತಿರಸ್ಕರಿಸಿದ ಸ್ಪೀಕರ್ ಇದು ಆತುರದಲ್ಲಿ ತೆಗೆದುಕೊಂಡ ನಿರ್ಧಾರ ಎಂದು ತಿಳಿಸಿದ್ದರು.