ಅಲ್ಪಸಂಖ್ಯಾತರು, ದಲಿತರ ಮೇಲಿನ ನಿರಂತರ ದೌರ್ಜನ್ಯ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ
![ಅಲ್ಪಸಂಖ್ಯಾತರು, ದಲಿತರ ಮೇಲಿನ ನಿರಂತರ ದೌರ್ಜನ್ಯ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ ಅಲ್ಪಸಂಖ್ಯಾತರು, ದಲಿತರ ಮೇಲಿನ ನಿರಂತರ ದೌರ್ಜನ್ಯ ಖಂಡಿಸಿ ಶಿವಮೊಗ್ಗದಲ್ಲಿ ಪ್ರತಿಭಟನೆ](https://www.varthabharati.in/sites/default/files/images/articles/2019/07/30/202950-1564490338.jpg)
ಶಿವಮೊಗ್ಗ, ಜು. 30: ದೇಶದಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಶಿವಮೊಗ್ಗ ಮುಸ್ಲಿಂ ಮುತ್ತಾಹಿದ ಮಹಾಝ್ ಸಂಘಟನೆ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು. ನಂತರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಅರ್ಪಿಸಿದವು.
ಜಾರ್ಖಂಡ್ನ ಯುವಕ ತಬ್ರೇಜ್ ಅನ್ಸಾರಿ ಎಂಬ ಯುವಕನನ್ನು ದುಷ್ಕರ್ಮಿಗಳು ಹೊಡೆದು ಹತ್ಯೆಗೈದಿದ್ದು, ಇಡೀ ರಾಷ್ಟ್ರವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಅಲ್ಪಸಂಖ್ಯಾತರು, ದಲಿತರ ಮೇಲೆ ಗುಂಪು ಹಲ್ಲೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಗುಂಪು ಹಿಂಸಾಚಾರಕ್ಕೆ ದೇಶದ ಹಲವೆಡೆ ಹಲವು ಅಮಾಯಕರು ಪ್ರಾಣ ತೆತ್ತಿದ್ದಾರೆ. 2015 ರಿಂದ 2019 ರವರೆಗೆ ದಾದ್ರಿ, ಜಾರ್ಖಂಡ್, ಅಲ್ವಾರ್, ಮಹಾರಾಷ್ಟ್ರದ ಖೈರಲಾಂಜಿ, ಬಾಂದ್ರ ಸೇರಿದಂತೆ ಹಲವೆಡೆ ದಲಿತ ಹಾಗೂ ಅಲ್ಪಸಂಖ್ಯಾತರು ಸಾವು-ನೋವಿಗೆ ತುತ್ತಾಗಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಗುಂಪು ಹಿಂಸಾಚಾರದಂತಹ ಅಮಾನವೀಯ, ಅನಾಗರೀಕ ಕೃತ್ಯಗಳಿಂದ ದೇಶದಲ್ಲಿ ಆತಂಕದ ವಾತಾವರಣ ಉಂಟಾಗುತ್ತಿದೆ. ಕೆಲ ಸಮುದಾಯದವರು ಭಯದಲ್ಲಿ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕಾನೂನು ರೂಪಿಸಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದೇಶದ ವಿವಿಧೆಡೆ ಗುಂಪು ಹತ್ಯೆಯಲ್ಲಿ ಭಾಗಿಯಾದ ಆರೋಪಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕು. ಈ ಸಂಬಂಧ ರಾಷ್ಟ್ರಪತಿಗಳು ಮಧ್ಯಪ್ರೇಶಿಸಿ ಸರ್ಕಾರಕ್ಕೆ ಸೂಚನೆ ನೀಡಬೇಕು. ಮುಂದಿನ ದಿನಗಳಲ್ಲಿ ಈ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸುವಂತೆ ಸಲಹೆ ನೀಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಮುಸ್ಲಿಂ ಮುತ್ತಹಿದ ಮಹಾಝ್ ಸಂಘಟನೆಯ ಅಧ್ಯಕ್ಷ ಪರ್ವೀಜ್ ಅಹಮ್ಮದ್, ಸೈಯದ್ ಇಕ್ಬಾಲ್ ಪಾಷ, ಹೆಚ್.ಕೆ.ಅಬ್ದುಲ್ ವಾಜೀದ್, ಇಮ್ತಿಯಾಜ್ ಖಾನ್, ಮೌಲಾನ ಶಕಿಲ್ ಉಲ್ಲಾ ಖಾನ್, ಅಬ್ದುಲ್ ವಾಹಬ್, ದಲಿತ ಸಂಘರ್ಷ ಸಮಿತಿಯ ಎಂ. ಗುರುಮೂರ್ತಿ, ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್, ಕೆ.ಪಿ.ಶ್ರೀಪಾಲ್ ಸೇರಿದಂತೆ ಮೊದಲಾದವರಿದ್ದರು.