ಟಿಪ್ಪು ಜಯಂತಿ ಆಚರಣೆ ರದ್ದು ಆದೇಶ ಅಪರಾಧ: ಸಿದ್ದರಾಮಯ್ಯ
"ಬಿಎಸ್ವೈ ಕೈಯಲ್ಲಿ ಕತ್ತಿ ಹಿಡಿದು, ಟಿಪ್ಪು ವೇಷ ಹಾಕಿ ಕುಣಿದಾಡಿದ್ದರು"
![ಟಿಪ್ಪು ಜಯಂತಿ ಆಚರಣೆ ರದ್ದು ಆದೇಶ ಅಪರಾಧ: ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ರದ್ದು ಆದೇಶ ಅಪರಾಧ: ಸಿದ್ದರಾಮಯ್ಯ](https://www.varthabharati.in/sites/default/files/images/articles/2019/07/30/202958-1564496776.jpg)
ಬೆಂಗಳೂರು, ಜು.30: ರಾಜ್ಯ ಸರಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವುದು ದೊಡ್ಡ ಅಪರಾಧ. ಟಿಪ್ಪು ಸುಲ್ತಾನ್ ದೇಶದ ಮೊದಲ ಸ್ವಾತಂತ್ರ ಹೋರಾಟಗಾರ. ನಾಡಿಗಾಗಿ ಮಕ್ಕಳನ್ನೇ ಒತ್ತೆ ಇಟ್ಟ ಅಪ್ರತಿಮ ದೇಶಭಕ್ತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಬ್ರಿಟೀಷರ ವಿರುದ್ಧ ಹೋರಾಡುತ್ತಲೇ ವೀರಮರಣ ಹೊಂದಿದ ಹುತಾತ್ಮ. ಕೋಮುವಾದವನ್ನೇ ತಲೆಯಲ್ಲಿ ತುಂಬಿಕೊಂಡಿರುವ ಬಿಜೆಪಿ ನಾಯಕರು ಇತಿಹಾಸದ ಅರಿವಿಲ್ಲದ ಮೂಢರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ ಹೋರಾಟದಲ್ಲಿಯೇ ಭಾಗವಹಿಸದ ಸಂಘ ಪರಿವಾರಕ್ಕೆ ಇದೆಲ್ಲ ಅರ್ಥವಾಗುವ ವಿಷಯ ಅಲ್ಲ. ಟಿಪ್ಪು ಸುಲ್ತಾನ್ ಒಂದು ಧರ್ಮಕ್ಕೆ ಸೇರಿದವರಲ್ಲ. ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಸೇರಿರುವ ಆಸ್ತಿ. ಈ ಕಾರಣಕ್ಕಾಗಿಯೇ ಟಿಪ್ಪು ಜಯಂತಿ ಆಚರಣೆಯ ನಿರ್ಧಾರವನ್ನು ಕೈಗೊಂಡಿದ್ದೆ ಎಂದು ಅವರು ಹೇಳಿದರು. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯಲು ಹೊರಟಿರುವ ಬಿಜೆಪಿಯ ನಡೆ ಅನಿರೀಕ್ಷಿತವೇನಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಕೈಯಲ್ಲಿ ಕತ್ತಿ ಹಿಡಿದು, ಟಿಪ್ಪು ವೇಷ ಹಾಕಿ ಕುಣಿದಾಡುತ್ತಾ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದರು. ಈಗ ಸಂಘ ಪರಿವಾರವನ್ನು ಖುಷಿಪಡಿಸಲು ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಟಿಪ್ಪು ಸುಲ್ತಾನ್ ಮೈಸೂರು ರಾಜ್ಯದ ರಾಜರಾಗಿದ್ದರು. ಅಭಿವೃದ್ಧಿಗೆ ಶ್ರಮಿಸಿದವರು. ಕೆಆರ್ಎಸ್ ಅಣೆಕಟ್ಟು ಕಟ್ಟಲು ಅಡಿಗಲ್ಲು ಹಾಕಿದವರು ಅವರು. ಕೈಗಾರಿಕೆಗಳ ಬೆಳವಣಿಗೆ, ಕೃಷಿ, ವ್ಯಾಪಾರಕ್ಕೆ ಪ್ರಯತ್ನ ಮಾಡಿದ್ದರು. ಅವರೊಬ್ಬ ಅಪ್ರತಿಮ ಸ್ವಾತಂತ್ರ ಪ್ರೇಮಿ ಅನ್ನುವ ಕಾರಣಕ್ಕೆ ಅವರ ಜಯಂತಿ ಆಚರಿಸಲು ನಿರ್ಧರಿಸಲಾಗಿತ್ತೇ ಹೊರತು, ಅದರಲ್ಲಿ ಬೇರೆ ಯಾವುದೇ ಉದ್ದೇಶವಿರಲಿಲ್ಲ ಎಂದು ಅವರು ಹೇಳಿದರು.