ಕಾಫಿ ಸಾಮ್ರಾಟ ಸಿದ್ದಾರ್ಥ್ ನಿಗೂಢ ನಾಪತ್ತೆಗೆ ಕಾಫಿನಾಡು ತಲ್ಲಣ
ಹುಟ್ಟೂರು ಚೀಕನಹಳ್ಳಿಯಲ್ಲಿ ನೀರವಮೌನ
![ಕಾಫಿ ಸಾಮ್ರಾಟ ಸಿದ್ದಾರ್ಥ್ ನಿಗೂಢ ನಾಪತ್ತೆಗೆ ಕಾಫಿನಾಡು ತಲ್ಲಣ ಕಾಫಿ ಸಾಮ್ರಾಟ ಸಿದ್ದಾರ್ಥ್ ನಿಗೂಢ ನಾಪತ್ತೆಗೆ ಕಾಫಿನಾಡು ತಲ್ಲಣ](https://www.varthabharati.in/sites/default/files/images/articles/2019/07/30/202961-1564497699.jpg)
ಚಿಕ್ಕಮಗಳೂರು, ಜು.30: ಕಾಫಿನಾಡಿನಲ್ಲಿ ಹುಟ್ಟಿ ಕಾಫಿಯ ಕಂಪನ್ನು ದೇಶ ವಿದೇಶಗಳಲ್ಲೂ ಹರಡುವಂತೆ ಮಾಡಿದ ನಾಡಿನ ಹೆಸರಾಂತ ಉದ್ಯಮಿ ವಿ.ಜಿ.ಸಿದ್ದಾರ್ಥ ಅವರ ನಾಪತ್ತೆ ಪ್ರಕರಣ ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದೆ. ಜಿಲ್ಲೆಯ ಕಾಫಿ ಉದ್ಯಮಕ್ಕೆ ಅಂತಾರಾಷ್ಟ್ರೀಯ ಸ್ಪರ್ಶ ನೀಡಿದ್ದಲ್ಲದೇ ಲಕ್ಷಾಂತರ ನಿರುದ್ಯೋಗಿಗಳಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಉದ್ಯೋಗ ನೀಡಿದ್ದ ಸಿದ್ದಾರ್ಥ್ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಅವರ ಮಾಲಕತ್ವದ ಸಂಸ್ಥೆಗಳ ಸಿಬ್ಬಂದಿ ದಿಗಿಲುಗೊಂಡಿದ್ದಾರೆ. ಸಿದ್ದಾರ್ಥ್ ನಾಪತ್ತೆ ಸುದ್ದಿಯಿಂದಾಗಿ ಹುಟ್ಟೂರು ಚೀಕನಹಳ್ಳಿಯಲ್ಲಿ ತಾಯಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರೆ, ಮತ್ತೊಂದರೆ ವಯೋವೃದ್ಧರಾಗಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆ ಮತ್ತಷ್ಟು ಜರ್ಝರಿತಗೊಂಡಿದ್ದಾರೆ.
ವಿ.ಜಿ.ಸಿದ್ದಾರ್ಥ ಸೋಮವಾರ ಸಂಜೆ 7ರ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೋಟು-ಮಂಗಳೂರು ನಡುವಿನ ನೇತ್ರಾವತಿಯ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು. ತಮ್ಮ ನೂರಾರು ಉದ್ಯಮಗಳ ಆರ್ಥಿಕ ಸಮಸ್ಯೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಗೆ ಬರಸಿಡಿಲು ಬಡಿದಂತಾಗಿದೆ. ಅದರಲ್ಲೂ ಸಿದ್ದಾರ್ಥ ಅವರನ್ನು ಹತ್ತಿರದಿಂದ ಬಲ್ಲ ಜಿಲ್ಲೆಯ ಪ್ರಮುಖ ರಾಜಕಾರಣಿಗಳು, ಕಾಫಿ ಬೆಳೆಗಾರರು ಸಿದ್ದಾರ್ಥ್ ನಾಪತ್ತೆ ಸುದ್ದಿಯಿಂದಾಗಿ ಆತಂಕಕ್ಕೊಳಗಾಗಿದ್ದಾರೆ.
ವಿ.ಜಿ.ಸಿದ್ದಾರ್ಥ್ ಅವರು ಚಿಕ್ಕಮಗಳೂರು ಜಿಲ್ಲೆಯ ಚೀಕನಹಳ್ಳಿಯಲ್ಲಿರುವ ಚೇತನಹಳ್ಳಿ ಎಸ್ಟೇಟ್ ಮಾಲಕರಾಗಿದ್ದು, ತಂದೆ ಗಂಗಯ್ಯ ಹೆಗ್ಡೆ, ತಾಯಿ ವಾಸಂತಿಹೆಗ್ಡೆ ಅವರ ಮಗನಾಗಿದ್ದಾರೆ. ಮಂಗಳೂರಿನಲ್ಲಿ ಪದವಿ ವಿದ್ಯಾಭ್ಯಾಸದ ಬಳಿಕ ಕಾಫಿ ಬೆಳೆಗಾರರಾಗಿದ್ದ ತಂದೆ ಗಂಗಯ್ಯಹೆಗ್ಡೆ ಅವರಿಂದ 30 ಸಾವಿರದಷ್ಟು ಹಣ ಪಡೆದು ಮುಂಬಯಿ ತಲುಪಿದ್ದ ಸಿದ್ದಾರ್ಥ್ ನಂತರ ಷೇರುಪೇಟೆ ಉದ್ಯಮ ಪ್ರವೇಶಿಸಿದ್ದರು. ಅಲ್ಲಿ ಗಳಿಸಿದ ಆದಾಯವನ್ನು ಕಾಫಿ ಉದ್ಯಮದಲ್ಲಿ ಹೂಡಿದ್ದ ಸಿದ್ದಾರ್ಥ್ ಚಿಕ್ಕಮಗಳೂರಿನಲ್ಲಿ ಎಬಿಸಿ ಗ್ಲೋಬಲ್ ಕಾಫಿ ಉದ್ಯಮ ಆರಂಭಿಸಿ ಈ ಕ್ಷೇತ್ರದಲ್ಲಿ ಭಾರೀ ಯಶಸ್ವಿಗಳಿಸಿದ್ದರು. ನಂತರ ಬೆಂಗಳೂರಿನಲ್ಲಿ ಕಾಫಿ ಡೇ ಎಂಬ ಉದ್ಯಮ ಆರಂಭಿಸಿದ್ದ ಅವರು ಅಲ್ಲೂ ಮಹತ್ವದ ಸಾಧನೆ ಮಾಡಿದರು. ಕಾಫಿ ಡೇ ಉದ್ಯಮ ಯಶಸ್ವಿಯಿಂದಾಗಿ ಅವರು ದೇಶ ವಿದೇಶದಾದ್ಯಂತ ಸುಮಾರು 1,550 ಕ್ಕೂ ಹೆಚ್ಚು ಕಾಫಿ ಡೇ ಶಾಖೆಗಳನ್ನು ಆರಂಭಿಸಿದ್ದಲ್ಲದೇ ರಿಯಲ್ ಎಸ್ಟೇಟ್, ಸಾಪ್ಟವೇರ್ ಕಂಪೆನಿಗಳು, ಹೋಟೆಲ್ ಮ್ಯಾನೇಜ್ಮೆಂಟ್, ಶಿಕ್ಷಣ ಸಂಸ್ಥೆಗಳು, ಕಾಫಿ ಎಸ್ಟೇಟ್ಗಳೂ ಸೇರಿದಂತೆ ಹತ್ತು ಹಲವು ವ್ಯವಹಾರಗಳನ್ನು ಆರಂಭಿಸಿ ದೇಶ, ವಿದೇಶಗಳಲ್ಲೂ ಮನೆಮಾತಾಗಿದ್ದರು.
ಈ ಮಧ್ಯೆ ಹೆಸರಾಂತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮಗಳು ಮಾಳವಿಕ ಅವರನ್ನು ವಿವಾಹವಾಗಿದ್ದ ಅವರು, ಎಸ್.ಎಂ.ಕೃಷ್ಣ ಅವರ ಅಳಿಯ ಎಂಬ ಕಾರಣಕ್ಕೆ ಮತ್ತಷ್ಟು ಜನಪ್ರಿಯರಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಉದ್ಯಮಗಳನ್ನು ಹೊಂದಿರುವ ಸಿದ್ದಾರ್ಥ್ ಎಬಿಸಿ ಗ್ಲೋಬಲ್ ಕಾಫಿ ಕಂಪೆನಿ, ಅಂಬರ್ ವ್ಯಾಲಿ ಬೋರ್ಡಿಂಗ್ ಸ್ಕೂಲ್, ಐಷಾರಾಮಿ ಸೆರಾಯ್ ಹೆಸರಿನ ರೆಸಾರ್ಟ್, ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜ್ನಂತಹ ನೂರಾರು ಕೋಟಿಗಳ ವ್ಯವಹಾರ ಹೊಂದಿದ್ದಾರೆ. ಈ ಸ್ಥೆಗಳ ಮೂಲಕ ಅವರು ಜಿಲ್ಲೆಯ ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಾವಿರಾರು ಕೋಟಿ ರೂ. ಒಡೆಯರಾಗಿದ್ದರೂ ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದ ಅವರು, ಜಿಲ್ಲೆಯ ಕಾಫಿ ಬೆಳೆಗಾರರು, ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಜಿಲ್ಲೆಯಲ್ಲಿರುವ ವ್ಯವಹಾರಗಳ ಸಂಬಂಧ ತಿಂಗಳು, ಎರಡು ತಿಂಗಳಿಗೊಮ್ಮೆಯಾದರೂ ಜಿಲ್ಲೆಗೆ ಬರುತ್ತಿದ್ದರು.
ಸಮಾಜ ಮುಖಿಯಾಗಿದ್ದ ಸಿದ್ದಾರ್ಥ್ ಸಮಾಜ ಸೇವಾ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತೀ ವರ್ಷ ಕಾರ್, ಬೈಕ್ಗಳ ರ್ಯಾಲಿ ಆಯೋಜಿಸುತ್ತಿದ್ದ ಅವರು, ಕೊಡುಗೈ ದಾನಿಯಾಗಿದ್ದರು. ಬಡ ವಿದ್ಯಾರ್ಥಿಗಳಿಗೆ ಉಚಿತ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಲು ಅವಕಾಶ ಕಲ್ಪಿಸಿದ್ದ ಅವರು, ಕಾಫಿ ತೋಟಗಳ ಕಾರ್ಮಿಕರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯದಂತಹ ಸಮಾಜ ಸೇವಾಕಾರ್ಯಗಳನ್ನು ಮಾಡುತ್ತಿದ್ದರು.
ಜಿಲ್ಲೆಯ ಕಾಫಿ ಉದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಸಿದ್ದಾಥ್ ಅವರು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಸಹಾಯಧನದಡಿಯಲ್ಲಿ ಗೊಬ್ಬರ, ಯಂತ್ರೋಪಕರಣ ಒದಗಿಸುವ ಯೋಜನೆಯನ್ನೂ ಆರಂಭಿಸಿ ಜಿಲ್ಲೆಯಲ್ಲಿ ಕಾಫಿ ಉದ್ಯಮದ ಏಳಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಸುಮಾರು 12 ಸಾವಿರ ಎಕರೆ ಕಾಫಿ ತೋಟ ಹೊಂದಿರುವ ಸಿದ್ದಾರ್ಥ್ ಲಕ್ಷಾಂತರ ಮಂದಿ ಕಾರ್ಮಿಕರಿಗೆ ಉದ್ಯೋಗ ನೀಡುವ ಮೂಲಕ ಅನ್ನದಾತರೆನಿಸಿಕೊಂಡಿದ್ದಾರೆ.
ಇನ್ನು, ಸಿದ್ದಾರ್ಥ್ ಹಾಗೂ ಮೂಡಿಗೆರೆ ತಾಲೂಕಿಗೂ ಅವಿನಾಭವ ಸಂಬಂದ ಇದ್ದು, ಬಹುತೇಕ ಕಾಫಿ ಕಾಫಿ ಬೆಳೆಗಾರರು ಸಿದ್ದಾರ್ಥ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಕುಟುಂಬದ ನಿಕಟವರ್ತಿ, ಸ್ನೇಹಿತರೂ ಆಗಿರುವ ಹಾಲಪ್ಪಗೌಡ ನೆನಪಿಸಿಕೊಳ್ಳತ್ತಾರೆ. ಅಲ್ಲದೇ ತಮ್ಮ ಹುಟ್ಟೂರು ಮೂಡಿಗೆರೆ ತಾಲೂಕಿನ ಚೀಕನಹಳ್ಳಿ ಗ್ರಾಮದ ಅಭಿವೃದ್ಧಿಗೂ ಸಿದ್ದಾರ್ಥ್ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆಂದು ಗ್ರಾಮಸ್ಥರು ಮೆಲುಕು ಹಾಕುತ್ತಾರೆ.
ಒಟ್ಟಾರೆ ತಮ್ಮ ಸರಳ ವ್ಯಕ್ತಿತ್ವ ಹಾಗೂ ಕಾಫಿ ಉದ್ಯಮವನ್ನು ವಿಶ್ವಮಟ್ಟಕ್ಕೇರಿಸಿ ಲಕ್ಷಾಂತರ ಮಂದಿಗೆ ಅನ್ನದಾತರಾಗಿದ್ದ ಸಿದ್ದಾರ್ಥ ಅವರು ನಾಪತ್ತೆಯಿಂದಾಗಿ ಇಡೀ ಜಿಲ್ಲೆಯ ಜನರು ತಲ್ಲಣಗೊಂಡಿದ್ದು, ಹುಟ್ಟೂರು ಚೀಕನಹಳ್ಳಿ ಹಾಗೂ ಮೂಡಿಗೆರೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಚಿಕ್ಕಮಗಳೂರು ನಗರದಲ್ಲಂತೂ ಜನರು ದೃಶ್ಯ ಮಾಧ್ಯಮಗಳಲ್ಲಿ ಸಿದ್ದಾಥ್ ನಾಪತ್ತೆ ಸುದ್ದಿಯನ್ನೇ ಟಿವಿಗಳನ್ನು ಬಂದ್ ಮಾಡದೇ ವೀಕ್ಷಿಸುತ್ತಿದ್ದು, ಸಿದ್ದಾರ್ಥ್ರಂತಹ ಉದ್ಯಮಿಯ ಸೇವೆ ಜಿಲ್ಲೆ, ರಾಜ್ಯ, ದೇಶಕ್ಕೆ ಅತ್ಯವಶ್ಯಕ. ಅವರ ಬದುಕು ದುರಂತ ಅಂತ್ಯ ಕಾಣದಿರಲಿ ಎಂದು ಆಶಿಸುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.
ಮೂರ್ಛೆ ಹೋದ ತಾಯಿ ವಾಸಂತಿ
ಉದ್ಯಮಿ ಸಿದ್ದಾರ್ಥ್ ನಾಪತ್ತೆ ಸುದ್ದಿ ಸೋಮವಾರ ರಾತ್ರಿ ಚೀಕನಹಳ್ಳಿಯಲ್ಲಿರುವ ಸಿದ್ದಾಥ್ ಅವರ ತಾಯಿಗೆ ತಿಳಿದಿದ್ದು, ಈ ಸುದ್ದಿ ತಿಳಿದ ತಕ್ಷಣ ಅವರು ಮೂರ್ಛೆ ಹೋಗಿದ್ದು, ಈ ವೇಳೆ ಸಂಬಂಧಿಕರು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆಂದು ತಿಳಿದು ಬಂದಿದೆ. ಚೀಕನಹಳ್ಳಿಯ ಚೇತನ ಎಸ್ಟೇಟ್ನ ಮನೆಯಲ್ಲಿ ಸದ್ಯ ಸಿದ್ದಾರ್ಥ್ ತಾಯಿ ಮಾತ್ರ ಇದ್ದು, ವಯೋವೃದ್ಧರಾಗಿರುವ ತಂದೆ ಗಂಗಯ್ಯ ಹೆಗ್ಡೆ ಅನಾರೋಗ್ಯದ ನಿಮಿತ್ತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಳ್ಳುತ್ತಿದ್ದ ಗಂಗಯ್ಯ ಹೆಗ್ಡೆ ಸಿದ್ದಾರ್ಥ್ ಅವರ ನಾಪತ್ತೆ ಸುದ್ದಿ ಕೇಳಿ ಮತ್ತಷ್ಟು ಜರ್ಝರಿತಗೊಂಡಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಚೀಕನಹಳ್ಳಿಯಲ್ಲಿರುವ ಸಿದ್ದಾರ್ಥ್ ಅವರ ಮನೆಗೆ ಮೂಡಿಗೆರೆ ಪಿಎಸ್ಸೈ ನೇತೃತ್ವದಲ್ಲಿ ಪೊಲೀಸರು ಸದ್ಯ ಬಿಗಿ ಭದ್ರತೆ ಒದಗಿಸಿದ್ದು, ವಾಸಂತಿ ಅವರನ್ನು ಸಂತೈಸಲು ಕುಟುಂಬಸ್ಥರು ಹಾಗೂ ಜಿಲ್ಲೆಯ ಪ್ರಮುಖ ರಾಜಕಾರಣಿಗಳು, ಕಾಫಿ ಬೆಳೆಗಾರರು ದೌಡಾಯಿಸುತ್ತಿದ್ದಾರೆ. ಭದ್ರತೆ ಹಿನ್ನೆಲೆಯಲ್ಲಿ ಎಸ್ಟೇಟ್ ಒಳಗೆ ಮಾಧ್ಯಮದವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ತಂದೆ ಸ್ವಾತಂತ್ರ್ಯ ಹೋರಾಟಗಾರ
ಸಿದ್ದಾರ್ಥ ಅವರ ಮನೆತನ ಜಿಲ್ಲಾದ್ಯಂತ ಹೆಸರು ವಾಸಿಯಾಗಿದೆ. ಹೆಸರಾಂತ ಕಾಫಿ ಬೆಳೆಗಾರರಾಗಿರುವ ಗಂಗಯ್ಯ ಹೆಗ್ಡೆ (98) ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಕಳಸ ಸಮೀಪದ ತನೂಡಿ ಎಂಬಲ್ಲಿ ಜನಿಸಿದ್ದ ಗಂಗಯ್ಯ ಹೆಗ್ಡೆ ಪದವಿ ಶಿಕ್ಷಣಕ್ಕಾಗಿ ಶಿವಮೊಗ್ಗಕ್ಕೆ ತೆರಳಿದ್ದ ವೇಳೆ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟದಿಂದ ಪ್ರಭಾವಿತರಾಗಿ ಅಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ನಾಡಿನ ಪ್ರಸಿದ್ಧ ಸ್ವಾತಂತ್ರ್ಯ ಚಳವಳಿ ಎಂದೇ ಖ್ಯಾತಿ ಪಡೆದಿರುವ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಅವರು ಪಾಲ್ಗೊಂಡಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.
ಚಿಕ್ಕಮಗಳೂರಿನ ಬಡ ಜನರಿಗೆ ಯಾವುದೇ ಶುಲ್ಕವಿಲ್ಲದೇ ಹೈಟೆಕ್ ಆರೋಗ್ಯ ಸೇವೆ ನೀಡಬೇಕೆಂದು ಕನಸು ಕಂಡಿದ್ದ ಸಿದ್ದಾರ್ಥ್ ಅವರು, ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಶಕ್ತಿನಗರದಲ್ಲಿ ತಮ್ಮ ತಂದೆ ಗಂಗಯ್ಯ ಹೆಗ್ಡೆ ಹಾಗೂ ತಾಯಿ ವಾಸಂತಿ ಅವರ ಹೆಸರಿನಲ್ಲಿ ಸೂಪರ್ ಸ್ಪೆಶಾಲಿಟಿ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ 5 ವರ್ಷಗಳ ಹಿಂದೆ ಅಡಿಗಲ್ಲು ಹಾಕಿದ್ದರು. ಈ ಆಸ್ಪತ್ರೆಯ ಕಾಮಗಾರಿ ಪ್ರಗತಿಯಲ್ಲಿದೆ.
ಬಾಗಿಲು ಮುಚ್ಚಿದ ಎಬಿಸಿ: ಸೋಮವಾರ ರಾತ್ರಿ ಸಿದ್ದಾರ್ಥ್ ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಇತ್ತ ಚಿಕ್ಕಮಗಳೂರು ನಗರದ ಎಬಿಸಿ ಕಂಪನಿ ಸಿಬ್ಬಂದಿ ದಿಗಿಲುಗೊಂಡಿದ್ದರು. ಈ ಕಾರಣಕ್ಕೆ ಮಂಗಳವಾರ ಬೆಳಗ್ಗೆ ಎಬಿಸಿ ಕಂಪೆನಿ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿರಲಿಲ್ಲ. ಕಂಪನಿ ಕಚೇರಿಗೆ ಹಾಗೂ ಗೇಟ್ಗೆ ಬೀಗ ಹಾಕಿದ್ದ ದೃಶ್ಯ ಬೆಳಗ್ಗೆ ಕಂಡು ಬಂತು. ಅಲ್ಲದೇ ಅಂಬರ್ ವ್ಯಾಲಿ ಶಾಲಾ ಮಕ್ಕಳಿಗೂ ರಜೆ ನೀಡಲಾಗಿತ್ತು. ಆದರೆ ಸೆರಾಯ್ ಹೋಟೆಲ್ ಹಾಗೂ ಕಾಫಿ ಡೇ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದ ದೃಶ್ಯ ಕಂಡು ಬಂತು.
ಆತಂಕದಲ್ಲಿ ನೂರಾರು ಕಾಫಿ ಬೆಳೆಗಾರರು
ಚಿಕ್ಕಮಗಳೂರು, ಮಡಿಕೇರಿ, ಹಾಸನ ಜಿಲ್ಲೆಗಳ ಬಹುತೇಕ ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿಯನ್ನು ಸಿದ್ದಾರ್ಥ್ ಮಾಲಕತ್ವದ ಎಬಿಸಿ ಕಂಪೆನಿಗೆ ನೀಡುತ್ತಿದ್ದರು. ಇದಕ್ಕೆ ಕಾರಣ ಸಿದ್ದಾರ್ಥ್ ಅವರ ಪಾರದರ್ಶಕ ವ್ಯವಹಾರ ಎನ್ನಲಾಗಿದ್ದು, ಈ ವರ್ಷ ಎಬಿಸಿಗೆ ಬೆಳೆಗಾರರು ಲಕ್ಷಾಂತರ ಕ್ವಿಂಟಾಲ್ನಷ್ಟು ಕಾಫಿ ನೀಡಿದ್ದು, ಇದರ ಹಣ ಇನ್ನೂ ಪಾವತಿಯಾಗಿಲ್ಲ ಎನ್ನಲಾಗಿದೆ. ಇದೀಗ ಸಿದ್ದಾರ್ಥ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಂಪೆನಿಗೆ ಕಾಫಿ ನೀಡಿದ ಬೆಳೆಗಾರರು ಆತಂಕಕ್ಕೊಳಗಾಗಿದ್ದರೂ ಹಣ ಸಂದಾಯವಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.
ಕಾಫಿ ಕೈಗಾರಿಕೆಗೆ ಅಪಾರ ನಷ್ಟ: ಕಾಫಿ ಕೈಗಾರಿಕೆ ಎಂದರೆ ಅಮಾಲ್ಗಮೇಟೇಡ್ ಬೀನ್ ಕಾಫಿ(ಎಬಿಸಿ) ಎಂಬಷ್ಟರ ಮಟ್ಟಿಗೆ ಹೆಸರು ಮಾಡಿದ್ದ ಎಬಿಸಿ ಕಂಪನಿಯ ಮಾಲಕ ಸಿದ್ಧಾರ್ಥ ಹೆಗ್ಗಡೆ ಕಣ್ಮರೆ ಅಥವಾ ಸಾವಿಗೆ ಶರಣಾಗಿರಬಹುದು ಎಂಬ ಸುದ್ಧಿ ಕಾಫಿ ಕೈಗಾರಿಕೆಗೆ ಅಪಾರ ನಷ್ಟದ ವಿಷಯವೆಂದು ಪ್ಲಾಂಟೇಷನ್ ಕೈಗಾರಿಕೆಯ ಸ್ಟಾಫ್ಸ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಅಭಿಪ್ರಾಯಿಸಿದ್ದಾರೆ.
ಸುಮಾರು 12 ಸಾವಿರ ಏಕರೆಗೂ ಹೆಚ್ಚು ಕಾಫಿ ತೋಟಗಳನ್ನು ಕೇವಲ 3 ದಶಕಗಳಲ್ಲಿ ಎಬಿಸಿ ತೆಕ್ಕೆಗೆ ತಂದ ಕೀರ್ತಿ ಸಿದ್ದಾರ್ಥ್ ಅವರದ್ದು, ಕಾಫಿ ಕ್ಯೂರಿಂಗ್ಗಳ ನಿರ್ಮಾಣದ ಮೂಲಕ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಒದಗಿಸಿದ್ದರು. ಕಾಫಿ ಡೇ, ಐಶಾರಾಮಿ ಸೆರಾಯ್ ಹೋಟೆಲ್ಗಳ ಮೂಲಕ ಆರ್ಥಿಕ ಜಗತ್ತನ್ನೆ ಗೆದ್ದು, ಕೈಗಾರಿಕೆ, ಪ್ರವಾಸೋದ್ಯಮ ಭೂಪಟದಲ್ಲಿ ಹೆಸರು ಮಾಡಿದ್ದರು. ಶಿಸ್ತು, ಅಚ್ಚು ಕಟ್ಟುತನ, ಗಂಭೀರತೆಗೆ ಹೆಸರಾಗಿದ್ದ ಇವರ ಆಡಳಿತ ಎಲ್ಲಾ ಕಡೆಯಿಂದಲೂ ಪ್ರಶಂಸೆಗೆ ಒಳಗಾಗಿತ್ತು. ಅವರಿಗೆ ಏನೂ ಆಗಿರಲು ಸಾಧ್ಯವಿಲ್ಲ. ಅವರು ಬಂದೇ ಬರುತ್ತಾರೆ.
- ಎಂ.ಎಲ್.ಮೂರ್ತಿ, ಕಾಂಗ್ರೆಸ್ ಮುಖಂಡ, ಸ್ನೇಹಿತಸರಳ ಜೀವಿಯಾಗಿದ್ದ ಸಿದ್ದಾರ್ಥ್ ದಾನ ಧರ್ಮಕ್ಕೂ ಹೆಸರಾಗಿದ್ದರು. ಸಿದ್ದಾರ್ಥರವರು ದೊಡ್ಡ ಆಸ್ಪತ್ರೆಯನ್ನು ಚಿಕ್ಕಮಗಳೂರಿನಲ್ಲಿ ನಿರ್ಮಿಸುವ ಕೈಂಕಾರ್ಯ ಕೈಗೊಂಡಿದ್ದರು. ದುರಂತವೆಂದರೆ, ಅವರ ಬೆಳವಣಿಗೆಯೇ ಅವರಿಗೆ ಮುಳ್ಳಾಗಿ ಅನಾಹುತಕ್ಕೆ ಈಡಾಗುವ ಸ್ಥಿತಿಗೆ ತಳ್ಳಿದೆ. ಅವರ ನಾಪತ್ತೆ ಸುದ್ದಿ ವಿಶೇಷವಾಗಿ ಈ ಜಿಲ್ಲೆಯ ಮಲೆನಾಡಿಗೆ ದೌರ್ಭಾಗ್ಯವಾಗಿದೆ.
-ಡಿ.ಎಲ್. ಎಚ್,ಎಚ್.ದೇವರಾಜ್