ವಿವಾದವನ್ನು ಅಂತ್ಯಗೊಳಿಸಬಹುದಿತ್ತು: ತ್ರಿವಳಿ ತಲಾಕ್ ಬಗ್ಗೆ ದಿಗ್ವಿಜಯ ಸಿಂಗ್

ಹೊಸದಿಲ್ಲಿ,ಜು.31: ತ್ರಿವಳಿ ತಲಾಕ್ ಮಸೂದೆಗೆ ತಾನು ಸೂಚಿಸಿದ್ದ ತಿದ್ದುಪಡಿಯನ್ನು ಒಪ್ಪಿಕೊಂಡಿದ್ದರೆ ಇಡೀ ವಿವಾದವನ್ನು ಕೊನೆಗೊಳಿಸಬಹುದಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಬುಧವಾರ ಹೇಳಿದ್ದಾರೆ.
‘ತ್ರಿವಳಿ ತಲಾಕ್ ನಿಷೇಧವನ್ನು ಉಲ್ಲಂಘಿಸುವ ವ್ಯಕ್ತಿಯನ್ನು ಜೈಲಿಗೆ ಕಳುಹಿಸಬಾರದು, ಬದಲಿಗೆ ಆತನಿಗೆ ಒಂದು ಲಕ್ಷ ರೂ. ದಂಡವನ್ನು ವಿಧಿಸಬೇಕು ಮತ್ತು ಆತ ತನ್ನ ಪತ್ನಿಗೆ 10,000 ರೂ. ಮಾಸಾಶನವನ್ನು ನೀಡುವಂತೆ ಮಾಡಬೇಕು ಎಂಬ ತಿದ್ದುಪಡಿಯನ್ನು ನಾನು ಸೂಚಿಸಿದ್ದೆ. ಮೋದಿ ಸರಕಾರವು ಇದನ್ನು ಒಪ್ಪಿಕೊಂಡಿದ್ದರೆ ಇಡೀ ವಿವಾದವೇ ಬಗೆಹರಿಯುತ್ತಿತ್ತು. ಮೋದಿಯವರ ಇಚ್ಛೆಯಂತೆ ಅವರಿಗೂ ಬೇಕಾಗಿರುವ ಮುಸ್ಲಿಮರ ವಿಶ್ವಾಸವನ್ನು ಅವರು ಗಳಿಸಬಹುದಿತ್ತು’ ಎಂದು ಸಿಂಗ್ ಟ್ವೀಟಿಸಿದ್ದಾರೆ.
ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆ, 2019ನ್ನು ರಾಜ್ಯಸಭೆಯು ಮಂಗಳವಾರ ಅಂಗೀಕರಿಸಿದ್ದು,ಲೋಕಸಭೆಯು ಈ ಮೊದಲೇ ಒಪ್ಪಿಗೆಯ ಮುದ್ರೆಯನ್ನೊತ್ತಿತ್ತು. ರಾಷ್ಟ್ರಪತಿಗಳ ಅಂಕಿತದ ಬಳಿಕ ಮಸೂದೆಯು ಶಾಸನವಾಗಲಿದೆ.
Next Story