‘ಸತ್ತಿದ್ದಾನೆ’ ಎಂದು ಈ.ಡಿ. ಘೋಷಿಸಿದ್ದ ಸಾಕ್ಷಿ ಗುರುವಾರ ಕೋರ್ಟ್ ಗೆ!
ಆಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಪ್ರಕರಣ

ಹೊಸದಿಲ್ಲಿ, ಜು.31: ‘ಸತ್ತಿದ್ದಾನೆ’ ಎಂದು ಸೋಮವಾರವಷ್ಟೇ ಜಾರಿ ನಿರ್ದೇಶನಾಲಯ (ಈ.ಡಿ)ವು ಘೋಷಿಸಿದ್ದ,ಆಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಕೆ.ಕೆ.ಶುಕ್ಲಾ ಗುರುವಾರ ನ್ಯಾಯಾಲಯಕ್ಕೆ ಹಾಜರಾಗಲಿದ್ದಾನೆ. ಪ್ರಕರಣದಲ್ಲಿಯ ಕೆಲವು ಅಮೂಲ್ಯ ದಾಖಲೆಗಳನ್ನು ತನ್ನ ವಶದಲ್ಲಿ ಹೊಂದಿರುವ ಶುಕ್ಲಾ ಬುಧವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ.
‘ನಾವು ಖೋಸ್ಲಾನ ನಿವಾಸಕ್ಕೆ ತೆರಳಿದಾಗೆಲ್ಲ ಆತ ಸಿಗುತ್ತಿರಲಿಲ್ಲ. ಆತ ನಿಧನನಾಗಿರಬಹುದು’ ಎಂದು ಈಡಿ ಅಧಿಕಾರಿಗಳು ಮಂಗಳವಾರ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದರು.
ಬುಧವಾರ ತನ್ನ ಈ ಹೇಳಿಕೆಯನ್ನು ತಿದ್ದಿಕೊಂಡಿರುವ ಈಡಿ, ಖೋಸ್ಲಾ ಜೀವಂತವಿದ್ದಾನೆ ಮತ್ತು ಅಗತ್ಯವಿದ್ದಾಗ ನ್ಯಾಯಾಲಯದಲ್ಲಿ ಹಾಜರಾಗುತ್ತಾನೆ ಎಂದು ವಾದಿ ಪರ ವಕೀಲರು ತಿಳಿಸಿದ್ದಾರೆಂದು ಹೇಳಿದೆ.
ಲಂಚದ ವಿವರಗಳು ಮತ್ತು ಅದನ್ನು ಸ್ವೀಕರಿಸಿದ್ದ ವ್ಯಕ್ತಿಗಳ ಹೆಸರುಗಳಿರುವ ಕೆಲವು ದಾಖಲೆಗಳು ಖೋಸ್ಲಾ ಬಳಿಯಿದ್ದು, ಆತ ಪ್ರಮುಖವಾದ ಸಾಕ್ಷಿಯಾಗಿದ್ದಾನೆ ಎಂದು ಸಿಬಿಐ ಹೇಳಿದೆ.
ಗುರುವಾರ ತನ್ನೆದುರು ಹಾಜರಾಗುವಂತೆ ನ್ಯಾಯಾಲಯವು ಖೋಸ್ಲಾಗೆ ಸೂಚಿಸಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ ಅವರ ಸೋದರಳಿಯ ಹಾಗೂ ಖೋಸ್ಲಾನ ಮಾಲಿಕ,ರತುಲ ಪುರಿ ಈ ಪ್ರಕರಣದಲ್ಲಿ ಶಂಕಿತ ಆರೋಪಿ.