ಸಾಲೆತ್ತೂರು: ಯುವಕನಿಗೆ ಅಪರಿಚಿತ ತಂಡದಿಂದ ಬ್ಲೇಡ್ ದಾಳಿ ಪ್ರಕರಣಕ್ಕೆ ಹೊಸ ತಿರುವು !

ಬಂಟ್ವಾಳ, ಜು. 31: ಸಾಲೆತ್ತೂರಿನ ವ್ಯಕ್ತಿಯೋರ್ವನಿಗೆ ಅಪರಿಚಿತ ತಂಡದಿಂದ ಬ್ಲೇಡ್ ದಾಳಿ ಪ್ರಕರಣವು ಇದೀಗ ತಿರುವು ಪಡೆದುಕೊಂಡಿದ್ದು, ತನ್ನ ವೈಯಕ್ತಿಕ ವಿಚಾರಗಳಿಗಾಗಿ ಸುಳ್ಳು ದೂರು ನೀಡಿ ಕಾನೂನನ್ನು ದುರ್ಬಳಕೆ ಹಾಗೂ ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸಾಲೆತ್ತೂರು ಕುಂಚಿತಡ್ಕ ನಿವಾಸಿ ಮುಹಮ್ಮದ್ ಸಫ್ವಾನ್ (19) ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
ಜು. 30 ರಂದು ಅಪರಿಚಿತರು ತನ್ನ ಮೇಲೆ ಬ್ಲೇಡ್ ದಾಳಿ ಮಾಡಿದ್ದಾರೆ ಎಂಬುದಾಗಿ ಸಾಲೆತ್ತೂರು ಕುಂಚಿತಡ್ಕದ ಸಫ್ವಾನ್ ದೂರಿನ ಅನ್ವಯ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಚುರುಕುಗೊಳಿಸಿದ ಪೊಲೀಸರು ಸಫ್ವಾನ್ ನ ಗಾಯದ ಬಗ್ಗೆ ಅನುಮಾನಗೊಂಡು ಆತನ ಕುಟುಂಬಿಕರಲ್ಲಿ ವಿಚಾರಿಸಿದ್ದಾರೆ.
ಸಾಲೆತ್ತೂರು ಪರಿಸರದ ಜನರು ಶಾಂತಿ ಮತ್ತು ಸಾಮರಸ್ಯದಿಂದಿದ್ದಾರೆ. ಆದರೆ, ಮುಹಮದ್ ಸಫ್ವಾನ್ ತನ್ನ ವೈಯಕ್ತಿಕ ವಿಚಾರಗಳಿಗಾಗಿ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದು, ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಲಕ್ಷ್ಮೀಪ್ರಸಾದ್, ದ.ಕ.ಎಸ್ಪಿ
ಇತ್ತೀಚಿನ ದಿನಗಳಲ್ಲಿ ಆತನ ವರ್ತನೆಯಲ್ಲಿ ಬದಲಾವಣೆ ಇರುವ ಬಗ್ಗೆ ಆತನ ಫೋಷಕರು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಸಫ್ವಾನ್ ನನ್ನು ವಿಚಾರಣೆಗೊಳಪಡಿಸಿದಾಗ ಪ್ರೇಮ ವೈಫಲ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ತಾನೆ ಬ್ಲೇಡ್ ನಿಂದ ಎಡಗೈಗೆ ಕುಯ್ದುಕೊಂಡಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ತನಗಾದ ಗಾಯದಿಂದ ತನ್ನ ಪ್ರೇಮ ವ್ಯವಹಾರ ಮನೆಯವರಿಗೆ ಗೊತ್ತಾಗುತ್ತದೆ ಎಂದು ಭಯಪಟ್ಟು ಯಾರೋ ಅಪರಿಚಿತ ಮುಸುಕುದಾರಿಗಳು ತನ್ನ ಬೈಕನ್ನು ಅಡ್ಡಗಟ್ಟಿ ಬ್ಲೇಡ್ ನಿಂದ ಹಲ್ಲೆ ಮಾಡಿರುವುದಾಗಿ ಆತ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಸಾಲೆತ್ತೂರು ಪರಿಸರವು ಶಾಂತಿ ಮತ್ತು ಸಾಮರಸ್ಯದಿಂದಿದೆ. ಆದರೆ, ಮುಹಮ್ಮದ್ ಸಫ್ವಾನ್ ತನ್ನ ವೈಯಕ್ತಿಕ ವಿಚಾರಗಳಿಗಾಗಿ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದು, ಈತನ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ಲಕ್ಷ್ಮೀಪ್ರಸಾದ್, ದ.ಕ.ಎಸ್ಪಿ







