ಹಿಂದಿನ ಸಂಸ್ಥಾನಗಳ ಆಡಳಿತಗಾರರು ‘ಪ್ರಜೆ ’ಗಳಿಲ್ಲದ ‘ಮಹಾರಾಜರು’: ಸುಪ್ರೀಂ

ಹೊಸದಿಲ್ಲಿ, ಜು.31: ಹಿಂದಿನ ಸಂಸ್ಥಾನಗಳು ಭಾರತ ಒಕ್ಕೂಟದಲ್ಲಿ ವಿಲೀನಗೊಂಡ ಬಳಿಕ ಅವುಗಳ ಆಡಳಿತಗಾರರು ಪ್ರಜೆಗಳು,ಸಾರ್ವಭೌಮತೆ ಮತ್ತು ರಾಜ್ಯವಿಲ್ಲದ ಹೆಸರಿಗಷ್ಟೇ ‘ಮಹಾರಾಜ’ರಾಗಿದ್ದಾರೆ ಮತ್ತು ಅವರ ವೈಯಕ್ತಿಕ ಆಸ್ತಿಗಳನ್ನು ಅರಸೊತ್ತಿಗೆಯ ಆಸ್ತಿಗಳೆಂದು ಪರಿಗಣಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.
ರಾಮಪುರ ಸಂಸ್ಥಾನವನ್ನು ಆಳುತ್ತಿದ್ದ ನವಾಬ ರಝಾ ಅಲಿ ಖಾನ್ ಅವರ ಖಾಸಗಿ ಆಸ್ತಿಗಳ ಉತ್ತರಾಧಿಕಾರತ್ವ ಕುರಿತು ವಿವಾದವನ್ನು ವಿಚಾರಣೆಗೆತ್ತಿಕೊಂಡಿದ್ದ ಮುಖ್ಯ ನ್ಯಾಯಾಧೀಶ ರಂಜನ ಗೊಗೊಯಿ, ನ್ಯಾಯಮೂರ್ತಿಗಳಾದ ದೀಪಕ ಗುಪ್ತಾ ಮತ್ತು ಅನಿರುದ್ಧದ ಬೋಸ್ ಅವರ ಪೀಠವು ಈ ಆದೇಶವನ್ನು ಹೊರಡಿಸಿದೆ.
ಅಂದಿನ ದೊರೆ ಭಾರತದೊಂದಿಗೆ ವಿಲೀನ ಒಪ್ಪಂದದಲ್ಲಿ ಘೋಷಿಸಿದ್ದ ಖಾಸಗಿ ಆಸ್ತಿಗಳಿಗೆ ಅರಸೊತ್ತಿಗೆಯ ಉತ್ತರಾಧಿಕಾರಿ ನಿಯಮಗಳು ಅನ್ವಯವಾಗುತ್ತವೆಯೇ ಅಥವಾ ಮುಸ್ಲಿಂ ವೈಯಕ್ತಿಕ ಕಾನೂನು(ಶರಿಯತ್) ಅನ್ವಯವಾಗುತ್ತದೆಯೇ ಎನ್ನುವ ಪ್ರಶ್ನೆ ಪೀಠದ ಮುಂದಿತ್ತು. ರಾಮಪುರ ಸಂಸ್ಥಾನವು 1949,ಮೇ 15ರಂದು ಭಾರತದೊಂದಿಗೆ ವಿಲೀನಗೊಂಡಿತ್ತು.
ನವಾಬರ ಖಾಸಗಿ ಆಸ್ತಿಗಳು ಅರಸೊತ್ತಿಗೆಗೆ ಸೇರಿದ್ದ ಆಸ್ತಿಗಳಾಗಿದ್ದರಿಂದ ಸಾಮಾನ್ಯ ಪ್ರಜೆಯಂತೆ ಅವುಗಳನ್ನು ವೈಯಕ್ತಿಕ ಆಸ್ತಿಯೆಂದು ಪರಿಗಣಿಸುವಂತಿಲ್ಲ ಮತ್ತು ಅವು ಅತ್ಯಂತ ಹಿರಿಯ ಪುರುಷ ವಾರಸುದಾರನಿಗೇ ಸೇರಬೇಕು ಮತ್ತು ಇತರರನ್ನು ಈ ಆಸ್ತಿಯಲ್ಲಿ ಪಾಲುಗಳಿಂದ ಹೊರಗಿರಿಸಬೇಕು ಎಂದು ಪ್ರಕರಣದಲ್ಲಿ ವಾದಿಸಲಾಗಿತ್ತು.
ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು,ಮುಸ್ಲಿಂ ವೈಯಕ್ತಿಕ ಕಾನೂನು ಅನ್ವಯಿಸುತ್ತದೆ ಮತ್ತು ನವಾಬ ರಝಾ ಅಲಿ ಖಾನ್ ಅವರು ಶಿಯಾ ಆಗಿದ್ದರಿಂದ ಅವರ ಆಸ್ತಿಗಳು ಮುಸ್ಲಿಂ ಕಾನೂನಿನಡಿ ಅವರ ಉತ್ತರಾಧಿಕಾರಿಗಳಲ್ಲಿ ಹಂಚಿಕೆಯಾಗಬೇಕು ಎಂದು ತೀರ್ಪು ನೀಡಿದೆ.