ಸಿದ್ದಾರ್ಥ ಸಾವಿನ ಉನ್ನತ ಮಟ್ಟದ ತನಿಖೆಗೆ ಮಾಜಿ ಸಚಿವೆ ಮೋಟಮ್ಮ ಆಗ್ರಹ
![ಸಿದ್ದಾರ್ಥ ಸಾವಿನ ಉನ್ನತ ಮಟ್ಟದ ತನಿಖೆಗೆ ಮಾಜಿ ಸಚಿವೆ ಮೋಟಮ್ಮ ಆಗ್ರಹ ಸಿದ್ದಾರ್ಥ ಸಾವಿನ ಉನ್ನತ ಮಟ್ಟದ ತನಿಖೆಗೆ ಮಾಜಿ ಸಚಿವೆ ಮೋಟಮ್ಮ ಆಗ್ರಹ](https://www.varthabharati.in/sites/default/files/images/articles/2019/08/1/203227-1564600144.jpg)
ಮೂಡಿಗೆರೆ, ಜು.31: ಸಿದ್ದಾರ್ಥ ಅವರ ನಿಗೂಢ ಸಾವಿನ ಹಿನ್ನಲೆಯಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮನೆಗೆ ತಾನು ತೆರಳಿ ಸಿದ್ದಾರ್ಥ ಅವರ ಪತ್ನಿ ಮಾಳವಿಕ ಹಾಗೂ ಕುಟುಂಬದವರಿಗೆ ಸಾಂತ್ವಾನ ಹೇಳಿ ಬಂದಿದ್ದೇನೆ. ಸಿದ್ದಾರ್ಥ ಅವರ ಆತ್ಯಕ್ಕೆ ದೇವರು ಶಾಂತಿಯನ್ನು ಕರುಣಿಸಲಿ. ಅವರ ಸಾವು ತನಗೆ ನೋವು ತಂದಿದೆ. ಅವರ ನಿಗೂಢ ಸಾವಿನ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾ ಸತ್ಯತೆಯನ್ನು ಹೊರತೆಗೆಯಬೇಕಾಗಿದೆ ಎಂದು ಮಾಜಿ ಸಚಿವೆ ಮೋಟಮ್ಮ ಒತ್ತಾಯಿಸಿದರು.
ಅವರು ಬುಧವಾರ ಪಟ್ಟಣದಲ್ಲಿ ಸಿದ್ದಾರ್ಥ ಅವರ ಮೃತದೇಹದ ಬರುವಿಕೆಗಾಗಿ ಕಾದು ನಿಂತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಪ್ರಥಮ ಬಾರಿ ಶಾಸಕಿಯಾಗಿದ್ದಾಗ ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಮತ್ತು ಅವರ ತಾಯಿ ವಾಸಂತಿ ಅವರ ಪರಿಚಯವಾಗಿತ್ತು. ಎರಡನೇ ಬಾರಿ ಶಾಸಕಿಯಾದಾಗ ಸಿದ್ದಾರ್ಥ ಅವರ ಪರಿಚಯವಾಗಿತ್ತು. ಎಸ್.ಎಂ.ಕೃಷ್ಣ ಸಂಪುಟದಲ್ಲಿ ಸಚಿವೆಯಾಗಿದ್ದಾಗ ಸಿದ್ದಾರ್ಥ ಅವರು ತನಗೆ ಹಲವು ಸಲಹೆ ಸಹಕಾರ ನೀಡಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸುವಾಗ ಆರ್ಥಿಕವಾಗಿ ಸಹಾಯ ಮಾಡಿದ್ದರು ಎಂದು ನೆನಪಿಸಿಕೊಂಡರು.
ಚಿಕ್ಕಮಗಳೂರಿನ ಸಿದ್ದಾರ್ಥ ಅವರ ಒಡೆತನದ ಅಂಬರ್ವ್ಯಾಲಿ ಶಾಲೆ ಪಕ್ಕದಲ್ಲೇ ಬಡವರಿಗೆಂದೆ ಶುಲ್ಕ ರಹಿತ ಆಸ್ಪತ್ರೆ ತೆರೆಯಲು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಕರೆತಂದು ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಕಾಫಿ ಉದ್ಯಮವನ್ನು ಶ್ರೀಮಂತಗೊಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು. 38 ವರ್ಷದ ಉದ್ಯಮ ನಡೆಸಿ ಸುಮಾರು 48 ಸಾವಿರ ಮಂದಿಗೆ ಉದ್ಯೋಗ ನೀಡಿ, ತಾನು ಮಾತ್ರ ಸರಳವಾಗಿಯೇ ಬದುಕಿದ್ದರು ಅವರ ಸಾವಿನಿಂದ ಅಪಾರ ನಷ್ಟವುಂಟಾಗಿದೆ. ಅವರ ನಿಗೂಢ ಸಾವು ಶೀಘ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.