ತಂತ್ರಜ್ಞಾನಕ್ಕೆ ಒತ್ತು: ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ಕಡಿತಕ್ಕೆ ಚಿಂತನೆ

ಹೊಸದಿಲ್ಲಿ: ವೈಮಾನಿಕ ಸುರಕ್ಷೆ ಜತೆ ಯಾವುದೇ ರಾಜಿ ಮಾಡಿಕೊಳ್ಳದೇ, ವಿಮಾನ ನಿಲ್ದಾಣಗಳ ಭದ್ರತಾ ಸಿಬ್ಬಂದಿ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಲು ಸಿಐಎಸ್ಎಫ್ ಚಿಂತನೆ ನಡೆಸಿದೆ.
ಇದಕ್ಕಾಗಿ ತಂತ್ರಜ್ಞಾನವನ್ನು ಹೆಚ್ಚು ಸಮರ್ಥವಾಗಿ ಬಳಸಿಕೊಳ್ಳಲು ಮುಂದಾಗಿದ್ದು, ಇದರಿಂದಾಗಿ ದೇಶದ 61 ವಿಮಾನ ನಿಲ್ದಾಣಗಳಲ್ಲಿನ ಸಿಬ್ಬಂದಿ ಸಂಖ್ಯೆ ಐದನೇ ಒಂದರಷ್ಟು ಕಡಿಮೆಯಾಗಲಿದೆ. ಕೆಲ ನಿರ್ದಿಷ್ಟ ವಿಮಾನ ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣ ನಿರ್ವಹಿಸುವ ಕಂಪನಿಗಳು ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜಿಸಿಕೊಳ್ಳಲೂ ಅವಕಾಶ ನೀಡಲಾಗುತ್ತದೆ.
ಪ್ರಸ್ತುತ 29 ಸಾವಿರ ಸಿಐಎಸ್ಎಫ್ ಸಿಬ್ಬಂದಿ ವಿಮಾನ ನಿಲ್ದಾಣಗಳ ಕರ್ತವ್ಯಗಳಲ್ಲಿದ್ದು, ಈ ಪೈಕಿ ಸುಮಾರು ಆರು ಸಾವಿರ ಮಂದಿಯನ್ನು ಕಡಿತಗೊಳಿಸಿ ಇವರನ್ನು ಶ್ರೀನಗರ, ಜಮ್ಮು, ಲೆಹ್, ವಿಜಯವಾಡ, ಜಬಲ್ಪುರ ಮತ್ತಿತರ ವಿಮಾನ ನಿಲ್ದಾಣಗಳಿಗೆ ನಿಯೋಜಿಸಲಾಗುತ್ತದೆ. ಈ ವಿಮಾನ ನಿಲ್ದಾಣಗಳಲ್ಲಿ ಸದ್ಯಕ್ಕೆ ಅರೆ ಮಿಲಿಟರಿ ಪಡೆಯನ್ನು ನಿಯೋಜಿಸಿಲ್ಲ. ಆದರೆ ಅರೆಮಿಲಿಟರಿ ಪಡೆಯ ನಿಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.
ಸದ್ಯಕ್ಕೆ ಸಿಐಎಸ್ಎಫ್ 61 ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ಹೊಸದಾಗಿ ಮರುಹಂಚಿಕೆ ಮಾಡುವುದರಿಂದ ಇನ್ನಷ್ಟು ವಿಮಾನ ನಿಲ್ದಾಣಗಳಿಗೆ ಸಿಐಎಸ್ಎಫ್ ಸುರಕ್ಷೆ ಒದಗಿಸಬಹುದಾಗಿದೆ" ಎಂದು ಸಿಐಎಸ್ಎಫ್ ಮಹಾನಿರ್ದೇಶಕ ರಾಜೇಶ್ ರಂಜನ್ ಸ್ಪಷ್ಟಪಡಿಸಿದ್ದಾರೆ.
"ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ, ಆರ್ಥಿಕವಾಗಿ ಕಾರ್ಯಸಾಧು ವಿಧಾನದಲ್ಲಿ ವಿಮಾನ ನಿಲ್ದಾಣಗಳ ಭದ್ರತಾ ಅಗತ್ಯತೆಗಳನ್ನು ಪೂರೈಸಲು ಹೊಸ ವಿಧಾನದಿಂದ ಸಾಧ್ಯವಾಗಲಿದೆ" ಎಂಬ ವಿಶ್ವಾಸವನ್ನು ಸಿಐಎಸ್ಎಫ್ ಹೆಚ್ಚುವರಿ ಮಹಾನಿರ್ದೇಶಕ (ವಿಮಾನಯಾನ) ಎಂ.ಎ.ಗಣಪತಿ ಹೇಳಿದ್ದಾರೆ.