ಸಚಿವ ಸಂಪುಟ ವಿಸ್ತರಣೆ ಇನ್ನೂ ವಿಳಂಬ ಸಾಧ್ಯತೆ
![ಸಚಿವ ಸಂಪುಟ ವಿಸ್ತರಣೆ ಇನ್ನೂ ವಿಳಂಬ ಸಾಧ್ಯತೆ ಸಚಿವ ಸಂಪುಟ ವಿಸ್ತರಣೆ ಇನ್ನೂ ವಿಳಂಬ ಸಾಧ್ಯತೆ](/images/placeholder.jpg)
ಬೆಂಗಳೂರು,ಆ.1: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ವಾರ ಕಳೆದರೂ ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ. ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸಮ್ಮತಿಸದ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.
ಆಗಸ್ಟ್ ಮೊದಲ ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆ ಇತ್ತು. ಆದರೆ, ಹೈಕಮಾಂಡ್ ನಾಯಕರು ಸಿಎಂ ಯಡಿಯೂರಪ್ಪ ಭೇಟಿಗೆ ಸಮಯ ನೀಡದ ಹಿನ್ನೆಲೆಯಲ್ಲಿ ಸಂಪುಟ ರಚನೆ ವಿಳಂಬವಾಗುತ್ತಿದ್ದು, ಆಕಾಂಕ್ಷಿಗಳಲ್ಲಿ ತೀವ್ರ ತಳಮಳ ಸೃಷ್ಟಿಸಿದೆ.
ಪಕ್ಷದ ಮೂಲಗಳ ಪ್ರಕಾರ ಆಗಸ್ಟ್ 8 ಅಥವಾ 10ರಂದು ಸಂಪುಟ ವಿಸ್ತರಣೆ ಸಾಧ್ಯತೆಗಳಿದ್ದು, ಆ.4ರ ರವಿವಾರ ಸಿಎಂ ಯಡಿಯೂರಪ್ಪ ಹೊಸದಿಲ್ಲಿಗೆ ತೆರಳಲಿದ್ದು, ಆ.5ರಂದು ಹೈಕಮಾಂಡ್ ನಾಯಕರ ಜತೆ ಸಮಾಲೋಚನೆ ನಡೆಸಿ ಸಚಿವರ ಪಟ್ಟಿ ಅಂತಿಮಗೊಳಿಸಲಿದ್ದಾರೆಂದು ಗೊತ್ತಾಗಿದೆ.
ಬಿ.ಶ್ರೀರಾಮುಲು-ಎಸ್ಟಿ-ಚಿತ್ರದುರ್ಗ, ಜೆ.ಸಿ.ಮಾಧುಸ್ವಾಮಿ-ಲಿಂಗಾಯತ- ತುಮಕೂರು, ಉಮೇಶ್ ಕತ್ತಿ-ಲಿಂಗಾಯತ-ಬೆಳಗಾವಿ, ಕೆ.ಎಸ್.ಈಶ್ವರಪ್ಪ- ಹಿಂದುಳಿದ ವರ್ಗ-ಶಿವಮೊಗ್ಗ, ಗೋವಿಂದ ಕಾರಜೋಳ-ಎಸ್ಸಿ(ಎಡಗೈ) ವಿಜಯಪುರ, ಆರ್.ಅಶೋಕ್-ಒಕ್ಕಲಿಗ-ಬೆಂಗಳೂರು.
ಡಾ.ಅಶ್ವತ್ಥ ನಾರಾಯಣ್-ಒಕ್ಕಲಿಗ-ಬೆಂಗಳೂರು, ಬಸವರಾಜ್ ಬೊಮ್ಮಾಯಿ- ಲಿಂಗಾಯತ-ಹಾವೇರಿ, ಬಸನಗೌಡಪಾಟೀಲ್ ಯತ್ನಾಳ್- ಲಿಂಗಾಯತ- ವಿಜಯಪುರ, ಎಚ್.ನಾಗೇಶ್-ಎಸ್ಸಿ-ಕೋಲಾರ, ಸಿ.ಟಿ.ರವಿ- ಒಕ್ಕಲಿಗ ಚಿಕ್ಕಮಗಳೂರು, ಎಂ.ಪಿ.ರೇಣುಕಾಚಾರ್ಯ-ಲಿಂಗಾಯತ-ದಾವಣಗೆರೆ ಸೇರಿ ಇನ್ನಿತರ ಪ್ರಮುಖರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಹೈಕಮಾಂಡ್ ಸಮ್ಮತಿಸಿದರೆ ಮೇಲ್ಕಂಡ ಪಟ್ಟಿ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಆದರೆ, ಕೊನೆಯ ಕ್ಷಣದಲ್ಲಿ ವರಿಷ್ಠರು ಕೆಲ ಬದಲಾವಣೆಗಳನ್ನು ಮಾಡಬಹುದು. ಈ ಮಧ್ಯೆ ಅನರ್ಹರಾಗಿರುವ ಶಾಸಕರ ಭವಿಷ್ಯ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಆ ವಿವಾದ ಬಗೆಹರಿದರೆ ಅವರಿಗೂ ಸಚಿವ ಸ್ಥಾನ ಕಲ್ಪಿಸುವ ಸಾಧ್ಯತೆಗಳಿವೆ.
ಸಂಪುಟ ವಿಸ್ತರಣೆ ಸಂಬಂಧ ಆಗಸ್ಟ್ 5ರಂದು ಮುಖ್ಯಮಂತ್ರಿ ಯಡಿಯೂರಪ್ಪ ಹೊಸದಿಲ್ಲಿಗೆ ಭೇಟಿ ನೀಡಿ ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಕುತೂಹಲಕ್ಕೆ ತೆರೆಬೀಳಲಿದ್ದು, ಅನಂತರ ಬಿಎಸ್ವೈ ನೇತೃತ್ವದ ಸರಕಾರದ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ.