ದಿವಾಳಿತನ ಸಂಹಿತೆ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆ ಅಸ್ತು

ಹೊಸದಿಲ್ಲಿ, ಆ.1: ದಿವಾಳಿತನ ಸಂಹಿತೆ ಕಾನೂನಿಗೆ ತಿದ್ದುಪಡಿ ತರುವ ವಿಧೇಯಕವನ್ನ್ನು ಲೋಕಸಭೆಯು ಗುರುವಾರ ಅಂಗೀಕರಿಸಿದೆ. ಕಂಪೆನಿಗಳು ನಾಶವಾಗುವುದಕ್ಕೆ ಅವಕಾಶ ನೀಡದಿರುವುದೇ ಈ ವಿಧೇಯಕದ ಉದ್ದೇಶವಾಗಿದೆಯೆಂದು ಕೇಂದ್ರ ಸರಕಾರ ತಿಳಿಸಿದೆ.
ದಿವಾಳಿತನ ಸಂಹಿತೆ ತಿದ್ದುಪಡಿ ವಿಧೇಯಕವನ್ನು ರಾಜ್ಯಸಭೆಯು ಈಗಾಗಲೇ ಅಂಗೀಕರಿಸಿದೆ. ಇಂದು ವಿಧೇಯಕದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕಂಪೆನಿಯ ಮುಚ್ಚುಗಡೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸುವುದುಷ್ಟೇ ದಿವಾಳಿತನ ಸಂಹಿತೆಯ ಏಕೈಕ ಉದ್ದೇಶವಲ್ಲ ಎಂದವರು ಸ್ಪಷ್ಟಪಡಿಸಿದರು.
ಈ ಸಂಹಿತೆಯ ಏಳು ಸೆಕ್ಷನ್ಗಳನ್ನು ತಿದ್ದುಪಡಿಗೊಳಿಸಲಾಗಿದೆ. ಒಮ್ಮೆ ಕಾರ್ಪೊರೇಟ್ ದಿವಾಳಿತನ ವಿಶ್ಲೇಷಣ ಪ್ರಕ್ರಿಯೆ (ಸಿಐಆರ್ಪಿ) ಆರಂಭಗೊಂಡಲ್ಲಿ ದಾವೆಗಳು ಹಾಗೂ ನ್ಯಾಯಾಂಗ ಪ್ರಕ್ರಿಯೆಗಳು ಸೇರಿದಂತೆ ಅದನ್ನು 330 ದಿನಗಳೊಳಗೆ ಪೂರ್ಣಗೊಳಿಸಬೇಕಾಗುವುದೆಂದು ನಿರ್ಮಲಾ ಅವರು ತಿದ್ದುಪಡಿ ವಿಧೇಯಕದ ಬಗ್ಗೆ ವಿವರಗಳನ್ನು ನೀಡುತ್ತಾ ತಿಳಿಸಿದರು.