ಹಾಲಿನ ಕಲಬೆರಕೆ: ಎನ್ಎಸ್ಎ ಕಾಯ್ದೆಯಡಿ ಮ.ಪ್ರ. ವ್ಯಾಪಾರಿ ವಿರುದ್ಧ ಮೊಕದ್ದಮೆ

ಉಜ್ಜಯಿನಿ, ಆ.1: ಹಾಲು ಉತ್ಪನ್ನಗಳ ಕಲಬೆರಕೆಗಾಗಿ ಮಧ್ಯಪ್ರದೇಶದ ಉಜ್ಜಯಿನಿಯ ವ್ಯಾಪಾರಿಯೊಬ್ಬನನ್ನು ಬಂಧಿಸಲಾಗಿದ್ದು ಆತನ ವಿರುದ್ಧ ಕಠಿಣವಾದ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ.
ಉಜ್ಜಯಿನಿಯ ಜಿಲ್ಲಾಧಿಕಾರಿ ಶಶಾಂಕ್ ಮಿಶ್ರಾ ಅವರು ‘ಕೃಷ್ಣ ಉದ್ಯೋಗ್ ಆ್ಯಂಡ್ ಬೇಕರಿ’ ಸಂಸ್ಥೆಯ ಮಾಲಕ 41ವರ್ಷ ವಯಸ್ಸಿನ ಕೀರ್ತಿ ಕೇಲ್ಕರ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪ ದಾಖಲಿಸಿದ್ದಾರೆ ಹಾಗೂ ಆತನನ್ನು ಪೊಲೀಸರು ಬಂಧಿಸಿದ್ದಾರೆಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್.ಪಿ. ತಿವಾರಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಆಹಾರ ಇಲಾಖೆಯು ಮಂಗಳವಾರದಂದು ಕೀರ್ತಿ ಕೇಲ್ಕರ್ ಒಡೆತನದ ಬೇಕರಿ ಮೇಲೆ ದಾಳಿ ನಡೆಸಿ, ಸುಮಾರು 45 ಕೆ.ಜಿ. ಕಲಬೆರಕೆಯ ಬೆಣ್ಣೆ, 450 ಕೆ.ಜಿ. ವನಸ್ಪತಿ ತುಪ್ಪ, ತುಪ್ಪ ತಯಾರಿಕೆಗೆ ಬಳಸಲಾದ ಎರಡು ಲೀಟರ್ ಕೃತಕ ಸಾರಗಳನ್ನು ಹಾಗೂ ಬೇಕರಿ ಉತ್ಪನ್ನಗಳಿಗೆ ಬಳಸಲಾದ ಕಳಪೆ ದರ್ಜೆಯ 57 ಕೆ.ಜಿ. ರಾಸಾಯನಿಕಗಳನ್ನು ವಶಪಡಿಸಿಕೊಂಡಿತ್ತು.
ಹಾಲು, ಡೇರಿ ಹಾಗೂ ಇತರ ಆಹಾರ ಉತ್ಪನ್ನಗಳ ಕಲಬೆರಕೆಯಲ್ಲಿ ಶಾಮೀಲಾಗಿರುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಮಧ್ಯಪ್ರದೇಶ ಸರಕಾರವು ಕಳೆದ ವಾರ ಜಿಲ್ಲಾ ಹಾಗೂ ಪೊಲೀಸ್ ಆಡಳಿತಕ್ಕೆ ಸೂಚನೆ ನೀಡಿತ್ತು.