ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಸಿದ್ಧಾರ್ಥ ಸಾವು ಪ್ರಕರಣ
ಉದ್ಯಮ ವಲಯದ ಹತಾಶೆಯನ್ನು ನಿವಾರಿಸಲು ಕೇಂದ್ರ ಕ್ರಮ ಕೈಗೊಳ್ಳಲಿ: ಟಿಎಂಸಿ ಆಗ್ರಹ

ಹೊಸದಿಲ್ಲಿ, ಆ.1: ಕಾಫಿ ಡೇ ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರ ಸಾವಿನ ಪ್ರಕರಣವು ರಾಜ್ಯಸಭೆಯಲ್ಲಿ ಗುರುವಾರ ಮಾರ್ಧನಿಸಿತು. ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾವಿಸಿದ ತೃಣಮೂಲ ಕಾಂಗ್ರೆಸ್ನ ಸದಸ್ಯ ಸುಖೇಂದು ಶೇಖರ್ ರಾಯ್ ಅವರು ಕೇಂದ್ರ ಸರಕಾರವು ಕೈಗಾರಿಕಾ ವಲಯದಲ್ಲಿ ತಲೆದೋರಿರುವ ಅನುಮಾನಗಳನ್ನು ಹಾಗೂ ಹತಾಶೆಯ ಭಾವನೆಯನ್ನು ಹೋಗಲಾಡಿಸಬೇಕು ಹಾಗೂ ಹೂಡಿಕೆದಾರರ ಆತ್ಮವಿಶ್ವಾಸವನ್ನು ಗಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ದೇಶಾದ್ಯಂತ ಕೆಫೆ ಕಾಫಿಡೇ ಮಳಿಗೆಗಳನ್ನು ನಡೆಸುತ್ತಿದ್ದ ಪ್ರಸಿದ್ಧ ಉದ್ಯಮಿ ಸಿದ್ಧಾರ್ಥ ಅವರ ನಿಧನವಾರ ವಿಶೇಷವಾಗಿ ಭಾರತೀಯ ಉದ್ಯಮ ವಲಯದಲ್ಲಿ ಹಾಗೂ ಜನಸಾಮಾನ್ಯರಲ್ಲಿ ಆಘಾತ ಹಾಗೂ ದುಃಖವನ್ನು ಉಂಟು ಮಾಡಿದೆಯೆಂದು ಅವರು ಹೇಳಿದರು.
ಆತ್ಮಹತ್ಯೆಗೆ ಮುನ್ನ ಸಿದ್ಧಾರ್ಥ ತನ್ನ ಕಂಪೆನಿಯ ಆಡಳಿತ ಮಂಡಳಿಗೆ ಬರೆದಿದ್ದಾರೆನ್ನಲಾದ ಪತ್ರದಲ್ಲಿನ ಅಂಶಗಳನ್ನು ಸದನದಲ್ಲಿ ಪ್ರಸ್ತಾವಿಸಿದರು. ಸಿದ್ಧಾರ್ಥ ಅವರು ಆದಾಯತೆರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳಿಂದ ಒತ್ತಡಕ್ಕೊಳಗಾಗಿರುವ ಹಾಗೆ ಭಾಸವಾಗುತ್ತಿದೆ ಎಂದರು.
ಸಿದ್ಧಾರ್ಥ ಅವರ ಆತ್ಮಹತ್ಯೆಯ ಪ್ರಕರಣವು ಒಂದು ಗಂಭೀರವಾದ ವಿಷಯವೆಂದು ಹೇಳಿದ ರಾಯ್ ಅವರು, ‘‘ ಉದ್ಯಮ ನಡೆಸುವುದನ್ನು ಸರಳಗೊಳಿಸಲು ಸರಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆಯಾದರೂ, ಕೆಲವು ವರದಿಗಳು ಹೇಳುವ ಪ್ರಕಾರ ಕಳೆದ ವರ್ಷವೊಂದರಲ್ಲೇ ಸುಮಾರು 5 ಸಾವಿರ ಶತಕೋಟ್ಯಾಧಿಪತಿಗಳು ಭಾರತ ವನ್ನು ತೊರೆದು ಹೋಗಿದ್ದಾರೆ. ಒಂದು ವೇಳೆ ನಮಗೆ ಕೈಗಾರಿಕೋದ್ಯಮಿಗಳು ಹಾಗೂ ಹೂಡಿಕೆದಾರರ ಆತ್ಮವಿಶ್ವಾಸವನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಗದೆ ಹೋದಲ್ಲಿ ಬೆಳವಣಿಗೆ ದರವು ಅಪಾಯಕಾರಿ ಪ್ರಮಾಣದಲ್ಲಿ ಕುಸಿಯಲಿದೆ ಹಾಗೂ ನಿರುದ್ಯೋಗವೂ ಹೆಚ್ಚಲಿದೆ’’ ಎಂದು ಕಳವಳ ವ್ಯಕ್ತಪಡಿಸಿದರು.
ಸರಕಾರವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಹಾಗೂ ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರ ಆತ್ಮವಿಶ್ವಾಸವನ್ನು ಮರುಗಳಿಸಲು ಸರಕಾರವು ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆಯೆಂದು ರಾಯ್ ಸದನದಲ್ಲಿ ಆಗ್ರಹಿಸಿದರು.