ಹೆಲಿಕಾಪ್ಟರ್ ಬಳಕೆ: 20 ಲಕ್ಷ ಠೇವಣಿ ಇರಿಸಲು ಬಿಜೆಪಿಗೆ ಹೈಕೋರ್ಟ್ ಆದೇಶ
ಬೆಂಗಳೂರು, ಆ.1: ಹೆಲಿಕಾಪ್ಟರ್ ಮತ್ತು ವಿಮಾನ ಬಳಕೆಗೆ ಸಂಬಂಧಿಸಿದಂತೆ ಬಾಕಿ ಪಾವತಿಸಬೇಕಾದ ತಕರಾರಿನಲ್ಲಿ 20 ಲಕ್ಷ ಮೊತ್ತವನ್ನು ಎರಡು ವಾರಗಳ ಒಳಗೆ ಅಧೀನ ಕೋರ್ಟ್ನಲ್ಲಿ ಠೇವಣಿ ಇರಿಸಬೇಕು ಎಂದು ಹೈಕೋರ್ಟ್ ಬಿಜೆಪಿಗೆ ನಿರ್ದೇಶಿಸಿದೆ.
ಈ ಕುರಿತು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿತು.
ಹಣ ಪಾವತಿಸಲು ಉಂಟಾಗಿರುವ ತಕರಾರು ಐದು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವುದು ತರವಲ್ಲ. ಈ ಸಿವಿಲ್ ದಾವೆಯನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಿ ಎಂದು ನ್ಯಾಯಪೀಠವು ಅಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಹೊಸದಿಲ್ಲಿಯ ಒಎಸ್ಎಸ್ ಏರ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ವಿಮಾನ ಮತ್ತು ಹೆಲಿಕಾಪ್ಟರ್ ಅನ್ನು ಬಿಜೆಪಿ 2014ರಲ್ಲಿ ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
Next Story