ಬಂಟ್ವಾಳ: ರಸ್ತೆ ಅಪಘಾತಕ್ಕೆ ಹಿರಿಯ ವಿದ್ವಾಂಸ ಮೃತ್ಯು

ಬಂಟ್ವಾಳ, ಆ. 1: ರಸ್ತೆ ಅಪಘಾತದಿಂದಲ್ಲಿ ಗಾಯಗೊಂಡಿದ್ದ ಉಸ್ತಾದ್ವೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹಿರಿಯ ಧಾರ್ಮಿಕ ವಿದ್ವಾಂಸ, ವಾಗ್ಮಿ, ಸುರಿಬೈಲಿನ ಅಡ್ಡೂರು ನಿವಾಸಿ ಉಸ್ತಾದ್ ಯೂಸುಫ್ ಹಾಜಿ ಮೃಪಟ್ಟವರು. ಇವರು ಇಂದು ಸಂಜೆ ವೇಳೆಗೆ ಬಿ.ಸಿ.ರೋಡಿನ ರಸ್ತೆ ದಾಟಲು ನಿಂತಿದ್ದ ವೇಳೆ ಕೈಂಕಬದ ಕಡೆಯಿಂದ ಬಂದ ಕಾರು ಢಿಕ್ಕಿಯಾಗಿದೆ. ಪರಿಣಾಮ ಗಾಯಗೊಂಡಿದ್ದ ಇವರನ್ನು ತಕ್ಷಣ ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿತಾಗದೇ ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಈ ಸಂಬಂಧ ಮೆಲ್ಕಾರ್ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದೆ.
ಮೂಲತಃ ಬಂಟ್ವಾಳ ತಾಲೂಕಿನ ಸುರಿಬೈಲಿನ ಅಡ್ಡೂರು ನಿವಾಸಿಯಾಗಿರುವ ಯೂಸುಫ್ ಹಾಜಿಯವರು ಸುರಿಬೈಲಿನ ಮಸೀದಿಯ ಸ್ಥಾಪಕ ಖತೀಬರಾದ ಅಬ್ದುಲ್ ಖಾದಿರ್ ಉಸ್ತಾದರ ಪುತ್ರರಾಗಿದ್ದಾರೆ. ಇವರ ಅಣ್ಣ, ತಮ್ಮಂದಿರು ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳನ್ನೂ ಉಲಮಾಗಳನ್ನಾಗಿ ಮಾಡಿದ್ದಾರೆ. ತಾಲೂಕಿನ ವಿವಿಧ ಮಸೀದಿ, ಮದ್ರಸ ಉಸ್ತಾದ್ ಆಗಿ ಸೇವೆ ಸಲ್ಲಿಸಿರುವ ಇವರು, ಕಾಂಜರ ಕಟ್ಟೆಯಲ್ಲಿ ಸುಮಾರು ವರ್ಷಗಳಲ್ಲಿ ದೀನೀ ಸೇವೆ ಗೈದಿದ್ದಾರೆ.
ಸಂತಾಪ: ಅಡ್ಡೂರು ಯೂಸುಫ್ ಹಾಜಿ ಅವರ ಅಕಾಲಿಕ ಮರಣಕ್ಕೆ ಕರ್ನಾಟಕ ರಾಜ್ಯ ದಾರಿಮಿ ಉಲಮ ಒಕ್ಕೂಟ, ದ.ಕ. ಜಿಲ್ಲಾ ಖಾಝಿ ತ್ವಾಕಾ ಉಸ್ತಾದ್, ಧಾರ್ಮಿಕ ಮುಖಂಡರಾದ ಎಸ್ಬಿ ದಾರಿಮಿ, ಮೌಲಾನಾ ಯು.ಕೆ. ದಾರಿಮಿ, ಉಸ್ಮಾನ್ ಪೈಝಿ ಉಳ್ಳಾಲ, ಬಿ.ಕೆ. ಅಬ್ದುಲ್ ಖಾದಿರ್ ಮುಸ್ಲಿಯಾರ್ ಬಂಬ್ರಾಣ, ಕುಕ್ಕಿಲ ದಾರಿಮಿ, ರೆಂಜಲಾಡಿ ದಾರಿಮಿ, ಕೆ.ಬಿ. ದಾರಿಮಿ, ಇರ್ಷಾದ್ ದಾರಿಮಿ ಮಿತ್ತಬೈಲ್, ರಶೀದ್ ಹಾಜಿ ಪರ್ಲಡ್ಕ ಸಂತಾಪ ಸೂಚಿಸಿದೆ.







