ಜಾಗತಿಕ ಬಂಡವಾಳ ವಿರೋಧಿಸುವುದೇ ವಿಮೋಚನೆಗೆ ಹಾದಿ: ಅರ್ಥಶಾಸ್ತ್ರಜ್ಞ ಪ್ರೊ.ಪ್ರಭಾತ್ ಪಟ್ನಾಯಕ್

ಬೆಂಗಳೂರು, ಆ.2: ದೇಶದಲ್ಲಿ ಪ್ರತಿದಿನ ಅಧಿಕವಾಗುತ್ತಿರುವ ಜಾಗತಿಕ ಬಂಡವಾಳವನ್ನು ವಿರೋಧಿಸುವುದೇ ಇಂದಿನ ರಾಜಕಾರಣದ ವಿಮೋಚನೆಗೆ ಹಾದಿಯಾಗುತ್ತದೆ ಎಂದು ಅರ್ಥಶಾಸ್ತ್ರಜ್ಞ ಪ್ರೊ.ಪ್ರಭಾತ್ ಪಟ್ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನವ ಕರ್ನಾಟಕ ಹಾಗೂ ಕ್ರಿಯಾ ಪ್ರಕಾಶನದಿಂದ ಕಾರ್ಲ್ಮಾರ್ಕ್ಸ್ 200 ನೆ ವರ್ಷಾಚರಣೆಯ ಅಂಗವಾಗಿ ಪ್ರಕಟಿಸುತ್ತಿರುವ ಮಾರ್ಕ್ಸ್ರ ‘ಬಂಡವಾಳ’ ಸಂಪುಟ-1 ಕನ್ನಡ ಅನುವಾದ ಕೃತಿ ಬಿಡುಗಡೆ ಪೂರ್ವ ಆಯೋಜಿಸಿದ್ದ ‘ಬಂಡವಾಳ’ದ 150 ವರ್ಷ ಹಾಗೂ ಎಡಪಂಥದ ಮರು-ಶೋಧನೆ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಜಾಗತೀಕರಣದ ನಂತರದಿಂದ ವಿದೇಶಿ ಬಂಡವಾಳವನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನ ಮಾಡುವ ಮೂಲಕ ದೇಶದ ಅಭಿವೃದ್ಧಿ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಆದರೆ, ಜಾಗತಿಕ ಬಂಡವಾಳದೊಳಗೆ ನಾವು ಪ್ರವೇಶ ಮಾಡಿ, ಅಲ್ಲಿಂದಲೇ ದೇಶವನ್ನು ಅಭಿವೃದ್ಧಿ ಮಾಡುತ್ತೇವೆ ಎಂದರೆ ಅದು ಅಸಾಧ್ಯದ ಮಾತು. ಅದನ್ನು ವಿರೋಧಿಸುತ್ತಾ, ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಎಡಪಂಥೀಯರು ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ಜಾಗತಿಕ ಬಂಡವಾಳವನ್ನು ಆಹ್ವಾನ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ, ನವ ಉದಾರವಾದಿಯ ಹೆಸರಿನಲ್ಲಿ ನವ ಬಂಡವಾಳವೇ ಒಳ ಪ್ರವೇಶಿಸುತ್ತಿದೆ. ಆದುದರಿಂದಾಗಿ ಎಡಪಂಥೀಯರು ಬಂಡವಾಳಶಾಹಿ ವ್ಯವಸ್ಥೆಗೆ ಪರ್ಯಾಯವಾಗಿ ಹೊಸ ವ್ಯವಸ್ಥೆಯನ್ನು ಕಟ್ಟಬೇಕಿದೆ ಎಂದು ಸಲಹೆ ನೀಡಿದರು.
ಬಂಡವಾಳಶಾಹಿಯ ಕುರಿತು ಅನೇಕ ಚರ್ಚೆಗಳು, ವಾದಗಳು ಹಾಗೂ ವಿಮರ್ಶೆಗಳು ನಡೆದಿದ್ದರೂ, ಮಾರ್ಕ್ಸ್ರಷ್ಟು ಪ್ರಬಲವಾಗಿ ಬೇರೆ ಯಾರೂ ಮಂಡಿಸಲು ಸಾಧ್ಯವಾಗಿಲ್ಲ. ಮಾರ್ಕ್ಸ್ವಾದವೇ ಇಲ್ಲದಿದ್ದರೆ ನಾವಿಂದು ಬಂಡವಾಳಶಾಹಿ ವ್ಯವಸ್ಥೆಯ ಚಹರೆಯನ್ನು ಅರ್ಥ ಮಾಡಿಕೊಳ್ಳಲು, ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ತಿಳಿಸಿದರು.
ಭಾರತದ ಮಟ್ಟಿಗೆ ಎಡಪಂಥೀಯರು ಜಾತಿಯ ಪ್ರಶ್ನೆಯನ್ನು ಪ್ರಧಾನವಾಗಿಟ್ಟುಕೊಂಡಿಲ್ಲ ಎನ್ನುವ ವಾದವಿದೆ. ಆದರೆ, ಅದು ಚರ್ಚೆಯ ವಿಷಯವೇ ಬೇರೆಯದ್ದಾಗಿದೆ. ಈ ಸಂದರ್ಭದಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳದೆ ಹೋದರೆ ಜಾತಿ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ ಕೆಲಸ ಹಾಗೂ ಅದರ ಬಗ್ಗೆ ಮಾತನಾಡಲು ಸಾಧ್ಯವಾಗುವುದಿಲ್ಲ. ಅದು ಹೇಗೆ ಬೆಳೆದು ಬಂದಿತು, ಅದರ ಹಿನ್ನೆಲೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬ ವಿಷಯದ ಕುರಿತು ಚರ್ಚೆಗಳು ನಡೆಯಬೇಕಿದೆ ಎಂದು ನುಡಿದರು.
ಎಡಪಂಥೀಯರು ಇಂದಿಗೂ 20 ನೆ ಶತಮಾನದ ವ್ಯಾಖ್ಯಾನಗಳನ್ನೇ ಮಾತನಾಡುತ್ತಿದ್ದಾರೆ. ಆದರೆ, ಅದನ್ನು ಸಮಕಾಲೀನಗೊಳಿಸುತ್ತಾ, ಹಿಂದಿನ ಮಿತಿಗಳನ್ನು ಮೀರಿ ಬೆಳೆಯಬೇಕಿದೆ. 30-40 ರ ದಶಕದಲ್ಲಿ ಮಾರ್ಕ್ಸ್ ಕುರಿತು ಇದ್ದ ಚರ್ಚೆ ಇದೀಗ ಮರು ರೂಪಗೊಳ್ಳಬೇಕಿದೆ ಎಂದು ಅವರು ಹೇಳಿದರು.
ಅಂಕಣಕಾರ ಹಾಗೂ ಪ್ರಾಧ್ಯಾಪಕ ಪ್ರೊ.ನಟರಾಜ್ ಹುಳಿಯಾರ್ ಮಾತನಾಡಿ, ಇಂದಿನ ಎಲ್ಲ ಹಂತದ ಚಳವಳಿಗಳಿಗೂ ಮಾರ್ಕ್ಸ್ವಾದವನ್ನು ಮರುಶೋಧನೆಗೆ ಒಳಪಡಿಸಿಕೊಳ್ಳಬೇಕು. ಅನೇಕ ಚಿಂತಕರು, ಬರಹಗಾರರು, ಓದುಗರಿಂದಲೇ ಮಾರ್ಕ್ಸ್ವಾದ ಬೆಳೆದಿದೆ. ಅಲ್ಲದೆ, ಎಲ್ಲ ಚಳವಳಿಗೂ ಇದೇ ಮೂಲ ಪ್ರೇರಕವಾಗಿದೆ ಎಂದು ಹೇಳಿದರು.
ವಿವಿಗಳಲ್ಲಿ ಸಿದ್ಧಾಂತಗಳ ನಾಶ: ಇಂದಿನ ಎಡಪಂಥೀಯ, ಅಂಬೇಡ್ಕರ್ವಾದ, ದಲಿತವಾದ ಸೇರಿದಂತೆ ಎಲ್ಲ ರೀತಿಯ ಪ್ರಗತಿಪರ ಸಿದ್ಧಾಂತಗಳು ವಿಶ್ವವಿದ್ಯಾಲಯಗಳಲ್ಲಿ ಜೀವಂತವಾಗಿರುತ್ತವೆ. ಆದರೆ, ಇಂದು ಎಲ್ಲ ಕಡೆಯೂ ಇವುಗಳನ್ನು ನಾಶ ಮಾಡಿ, ಕೇವಲ ಶೈಕ್ಷಣಿಕ ಪಠ್ಯಗಳನ್ನಾಗಿ ಮಾಡಲಾಗುತ್ತಿದ್ದು, ಚಿಂತನೆಗೆ ಹಚ್ಚುವ ಕೆಲಸ ಮಾಡುತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಬರಹಗಾರ್ತಿ ಹಾಗೂ ಸ್ತ್ರೀವಾದಿ ಚಿಂತಕಿ ಎಚ್.ಎಸ್.ಅನುಪಮಾ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಕೆ.ಎನ್.ಉಮೇಶ್, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಪ್ರಾಧ್ಯಾಪಕ ಕಿರಣ್ ಗಾಜನೂರು ಉಪಸ್ಥಿತರಿದ್ದರು.
ಬಂಡವಾಳಶಾಹಿ ಪ್ರಜಾಪ್ರಭುತ್ವದ ಮುಖವಾಡ ಧರಿಸಿ ಜನರನ್ನು ವಂಚಿಸುತ್ತಿದೆ. ಈಗ ಅದರ ಬೆನ್ನಿಗೆ ಮೂಲಭೂತವಾದ ನಿಂತಿದೆ. ಮೂಲಭೂತವಾದ ಮತ್ತು ಬಂಡವಾಳಶಾಹಿ ಜಗತ್ತಿನ ಮಹಾಮಾರಿಗಳು.
-ಪ್ರೊ, ಪ್ರಭಾತ್ ಪಟ್ನಾಯಕ್, ಅರ್ಥಶಾಸ್ತ್ರಜ್ಞ
ಇಂದಿನ ಆಡಳಿತ ವ್ಯವಸ್ಥೆಯು ವ್ಯವಸ್ಥಿತವಾಗಿ ಮಾರ್ಕ್ಸ್ವಾದ, ಸಮಾಜವಾದ, ಸಮಾನತೆ ಎಲ್ಲವನ್ನೂ ನಾಶ ಮಾಡಲು ವ್ಯವಸ್ಥಿತವಾದ ಸಂಚು ರೂಪಿಸಲಾಗಿದೆ. ಮಾರ್ಕ್ಸ್ವಾದವನ್ನು ನಕಾರಾತ್ಮಕ ಚಿಂತನೆಗಳಾಗಿ ಬಿಂಬಿಸಲಾಗುತ್ತಿದೆ. ಕಾರ್ಪೋರೇಟ್ ವ್ಯವಸ್ಥೆ ಹಾಗೂ ಇಂದಿನ ಮಾಧ್ಯಮ ಮೂಲವನ್ನೇ ನಿರ್ನಾಮ ಮಾಡಲು ಮುಂದಾಗಿವೆ.
-ಪ್ರೊ. ನಟರಾಜ್ ಹುಳಿಯಾರ್, ಚಿಂತಕ







