ಜಾಧವ್ಗೆ ಅಡೆತಡೆಯಿಲ್ಲದ ದೂತಾವಾಸ ಸಂಪರ್ಕ ಸೌಲಭ್ಯಕ್ಕೆ ಭಾರತದ ಒತ್ತಾಯ

ಹೊಸದಿಲ್ಲಿ, ಆ.2: ಕುಲಭೂಷಣ ಜಾಧವ್ ಅವರಿಗೆ ಯಾವುದೇ ಬೆದರಿಕೆ ಮತ್ತು ಸೇಡಿನ ಭಾವನೆಯಿಲ್ಲದ ವಾತಾವರಣದಲ್ಲಿ ಅಡಚಣೆರಹಿತವಾಗಿ ದೂತಾವಾಸ ಸಂಪರ್ಕದ ಸೌಲಭ್ಯವನ್ನು ಒದಗಿಸುವಂತೆ ಭಾರತವು ಪಾಕಿಸ್ತಾನಕ್ಕೆ ಸೂಚಿಸಿದೆ. ಗುರುವಾರ ಪಾಕಿಸ್ತಾನವು ಜಾಧವ್ಗೆ ಭಾರತೀಯ ದೂತಾವಾಸ ಸಂಪರ್ಕದ ಸವಲತ್ತನ್ನು ಒದಗಿಸುವುದಾಗಿ ಭಾರತಕ್ಕೆ ತಿಳಿಸಿತ್ತು.
ಅಂತರರಾಷ್ಟ್ರಿಯ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜಾಧವ್ಗೆ ಯಾವುದೇ ಅಡೆತಡೆಯಿಲ್ಲದೆ,ಬೆದರಿಕೆ ರಹಿತ ವಾತಾವರಣದಲ್ಲಿ ದೂತಾವಾಸ ಅಧಿಕಾರಿಗಳೊಂದಿಗೆ ಭೇಟಿಗೆ ಅವಕಾಶ ನೀಡಬೇಕು ಎಂದು ಪಾಕಿಸ್ತಾನಕ್ಕೆ ತಿಳಿಸಲಾಗಿದ್ದು,ಅದರ ಉತ್ತರವನ್ನು ಕಾಯಲಾಗುತ್ತಿದೆ ಎಂದು ಬೆಳವಣಿಗೆಯನ್ನು ಬಲ್ಲ ಮೂಲಗಳು ತಿಳಿಸಿದವು.
ಜಾಧವ್ ಭಾರತೀಯ ಅಧಿಕಾರಿಗಳನ್ನು ಭೇಟಿಯಾಗಲು ಪಾಕಿಸ್ತಾನವು ಕೆಲವು ಷರತ್ತುಗಳನ್ನು ವಿಧಿಸಿದೆ ಎಂಬ ವರದಿಗಳ ನಡುವೆಯೇ ಭಾರತವು ತಾನು ಆ ರಾಷ್ಟ್ರವು ಮುಂದಿಟ್ಟಿರುವ ಕೊಡುಗೆಯನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದೆ. ಭಾರತೀಯ ಅಧಿಕಾರಿಗಳು ಮತ್ತು ಜಾಧವ್ ಭೇಟಿ ಸಂದರ್ಭದಲ್ಲಿ ತನ್ನ ಅಧಿಕಾರಿಗಳ ಉಪಸ್ಥಿತಿಯ ಷರತ್ತನ್ನು ಪಾಕಿಸ್ತಾನವು ಹೇರಿದೆ ಎಂದು ವರದಿಗಳು ತಿಳಿಸಿದ್ದವು.
ಪಾಕಿಸ್ತಾನದ ಪ್ರಸ್ತಾವವನ್ನು ನಾವು ಪರಿಶೀಲಿಸುತ್ತಿದ್ದೇವೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ಪಾಕಿಸ್ತಾನದ ಜೊತೆಗೆ ಸಂಪರ್ಕವನ್ನು ಕಾಯ್ದುಕೊಳ್ಳುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ ಕುಮಾರ್ ತಿಳಿಸಿದ್ದಾರೆ.