ಬಾಲ ವಿಕಾಸ ಯೋಜನೆಯಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ
ಬೆಂಗಳೂರು, ಆ.2: ಐದು ವರ್ಷದೊಳಗಿನ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರ ಒದಗಿಸುವ ಸಮಗ್ರ ಬಾಲ ವಿಕಾಸ ಯೋಜನೆಯಲ್ಲಿ ನಡೆದಿರುವ ಕೋಟ್ಯಂತರ ರೂ.ಗಳ ಅವ್ಯವಹಾರ ಕುರಿತಂತೆ ಸರಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಮಂಡಳಿ ಅಧ್ಯಕ್ಷ ಜಿ.ಆರ್.ಶಿವಶಂಕರ್, 1970ರಲ್ಲಿ ಪ್ರಾರಂಭಗೊಂಡಿರುವ ಸಮಗ್ರ ಬಾಲ ವಿಕಾಸ ಯೋಜನೆಯಲ್ಲಿ 65 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿದಿನ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಪೂರಕ ಪೌಷ್ಠಿಕ ಆಹಾರ ಪಡೆಯುತ್ತಿದ್ದಾರೆ. ಸುಪ್ರೀಂ ಕೋರ್ಟ್ ಈ ಯೋಜನೆಯಲ್ಲಿ ಯಾವುದೇ ಕಾರಣಕ್ಕೂ ಖಾಸಗಿ ಗುತ್ತಿಗೆದಾರರನ್ನು ಬಳಸಬಾರದು ಹಾಗೂ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ವಿಕೇಂದ್ರೀಕರಣದ ಮೂಲಕ ಮಹಿಳಾ ಸಂಘಟನೆಗಳಿಂದ ಪಡೆಯಲು ತೀರ್ಪು ನೀಡಿದೆ ಎಂದು ಹೇಳಿದರು.
ರಾಜ್ಯದಲ್ಲಿ ವಾರ್ಷಿಕ ಸಾವಿರ ಕೋಟಿ ಅನುದಾನವನ್ನು ಈ ಯೋಜನೆಯಲ್ಲಿ ವ್ಯಯಿಸಲಾಗುತ್ತಿದೆ. ಆದರೆ, ಸುಪ್ರೀಂ ಕೋರ್ಟಿನ ತೀರ್ಪು ಉಲ್ಲಂಘಿಸಿ ಐಸಿಡಿಎಸ್ ಯೋಜನೆಯ ಆಹಾರ ಸರಬರಾಜು ಯೋಜನೆಯನ್ನು ಜನತಾ ಬಜಾರ್ಗೆ ನೀಡಲು ಪ್ರಯತ್ನಿಸಲಾಗುತ್ತಿದೆ. ಪುಟ್ಟ ಮಕ್ಕಳಿಗೆ ಕಳಪೆ ಹಾಗೂ ಗುಣಮಟ್ಟ ರಹಿತ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ ನಿರ್ಲಕ್ಷದ ಉತ್ತರ ದೊರಕುತ್ತದೆ ಎಂದು ದೂರಿದರು.
ಕಳೆದ ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ಗುತ್ತಿಗೆದಾರ ಶಿವಕುಮಾರ್ ಎಂಬಾತ ಜನತಾ ಬಜಾರ್ಗೆ ಆಹಾರ ಸಾಮಗ್ರಿಗಳ ಸರಬರಾಜು ಗುತ್ತಿಗೆಯನ್ನು ಹಸ್ತಾಂತರಗೊಳಿಸಲು ಪ್ರಯತ್ನಿಸಿ ಕೋಟ್ಯಂತರ ರೂ. ಲಂಚವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿಗಳು, ಮಾಜಿ ಸಚಿವರಾದ ಉಮಾಶ್ರೀ ಹಾಗೂ ಜಯಮಾಲ ಅವರಿಗೆ ನೀಡಿರುವ ಬಗ್ಗೆ ಹೇಳಿದ್ದಾನೆ. ಸದರಿ ಯೋಜನೆಯಲ್ಲಿ ಖಾಸಗಿ ಗುತ್ತಿಗೆದಾರರು ಸರಕಾರದ ಯೋಜನೆಯ ಅನುಷ್ಠಾನಕ್ಕಾಗಿ ಕೋಟ್ಯಂತರ ರೂ. ಲಂಚವನ್ನು ಏಕೆ ನೀಡಿದ್ದಾರೆ ಎಂಬುದರ ಬಗ್ಗೆ ಸರಕಾರ ಕೂಡಲೇ ಎಫ್ಐಆರ್ ದಾಖಲಿಸಿ ಉನ್ನತಮಟ್ಟದಲ್ಲಿ ತನಿಖೆ ನಡೆಸಬೇಕು. ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.