ತ್ರಿವಳಿ ತಲಾಕ್ ಮಸೂದೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಕೇರಳದ ಮುಸ್ಲಿಂ ಸಂಘಟನೆ

ಹೊಸದಿಲ್ಲಿ, ಆ.2: ಮುಸ್ಲಿಮರಲ್ಲಿ ತ್ರಿವಳಿ ತಲಾಕನ್ನು ಅಪರಾಧೀಕರಣಗೊಳಿಸುವ ಮುಸ್ಲಿಂ ಮಹಿಳಾ (ಮದುವೆಯ ಹಕ್ಕುಗಳ ರಕ್ಷಣೆ) ಮಸೂದೆ, 2019ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಹಸಿರು ನಿಶಾನೆ ತೋರಿಸಿದ ಮರುದಿನವೇ ಈ ಕಾನೂನನ್ನು ಪ್ರಶ್ನಿಸಿ ಕೇರಳದ ಮುಸ್ಲಿಂ ಸಂಘಟನೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.
ತ್ರಿವಳಿ ತಲಾಕ್ ಮಸೂದೆಯನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಕೇರಳದ ಮೂಲದ ಸುನ್ನಿ ಮುಸ್ಲಿಂ ವಿದ್ವಾಂಸರು ಮತ್ತು ಪಂಡಿತರ ಧಾರ್ಮಿಕ ಸಂಘಟನೆ ಸಮಸ್ತ ಕೇರಳ ಜಮೀಯತುಲ್ ಉಲಮ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದೆ. ನೂತನವಾಗಿ ಜಾರಿಗೊಂಡಿರುವ ಕಾನೂನು ಪ್ರಕಾರ, ತಕ್ಷಣ ನೀಡುವ ತ್ರಿವಳಿ ತಲಾಖ್ ಒಂದು ಕ್ರಿಮಿನಲ್ ಅಪರಾಧವಾಗಿದ್ದು ತನ್ನ ಮಡದಿಗೆ ತಕ್ಷಣ ತಲಾಕ್ ನೀಡುವ ಪತಿಯಂದಿರಿಗೆ ಗರಿಷ್ಟ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ನೀಡಬಹುದಾದ ನಿಬಂಧನೆಯನ್ನು ಹೊಂದಿದೆ.
ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಬಿಜು ಜನತಾದಳದ ಬೆಂಬಲದೊಂದಿಗೆ 99-84 ಮತಗಳ ಅಂತರದಿಂದ ಅಂಗೀಕರಿಸಲಾಗಿತ್ತು. ಎನ್ಡಿಎ ಮಿತ್ರಪಕ್ಷಗಳಾದ ಸಂಯುಕ್ತ ಜನತಾದಳ ಮತ್ತು ಎಐಎಡಿಎಂಕೆ ಮತದಾನ ಬಹಿಷ್ಕರಿಸಿ ಹೊರನಡೆದಿದ್ದರೆ ವಿರೋಧ ಪಕ್ಷಗಳಾದ ಬಿಎಸ್ಪಿ, ಟಿಡಿಪಿ ಮತ್ತು ಟಿಆರ್ಎಸ್ ಯಾವುದೇ ನಿಲುವು ತಳೆಯದೆ ತಟಸ್ಥವಾಗಿದ್ದವು.