ಶಾಸಕ ಝಮೀರ್ ಅನರ್ಹಗೊಳಿಸುವಂತೆ ಚು.ಆಯೋಗಕ್ಕೆ ದೂರು
![ಶಾಸಕ ಝಮೀರ್ ಅನರ್ಹಗೊಳಿಸುವಂತೆ ಚು.ಆಯೋಗಕ್ಕೆ ದೂರು ಶಾಸಕ ಝಮೀರ್ ಅನರ್ಹಗೊಳಿಸುವಂತೆ ಚು.ಆಯೋಗಕ್ಕೆ ದೂರು](/images/placeholder.jpg)
ಬೆಂಗಳೂರು, ಆ.3: ವಿಧಾನಸಭಾ ಚುನಾವಣೆ ಪ್ರಕ್ರಿಯೆ ಸಂದರ್ಭದಲ್ಲಿ ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರದೊಳಗೆ ಸುಳ್ಳು ಮಾಹಿತಿ ದಾಖಲು ಮಾಡಿರುವ ಹಿನ್ನೆಲೆ ಝಮೀರ್ ಅಹ್ಮದ್ ಖಾನ್ ಅವರ ಶಾಸಕ ಸ್ಥಾನವನ್ನು ಅನರ್ಹಗೊಳಿಸಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಶನಿವಾರ ಇಲ್ಲಿ ಶೇಷಾದ್ರಿ ರಸ್ತೆಯ ಚುನಾವಣಾ ಆಯೋಗದ ಕಚೇರಿಯಲ್ಲಿ ದೂರು ಸಲ್ಲಿಸಿದ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು, 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಝಮೀರ್ ಅಹ್ಮದ್ ಅವರು ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಮಾಜಿ ಶಾಸಕ ಚಲುವರಾಯಸ್ವಾಮಿ ಅವರಿಂದ 42 ಲಕ್ಷ ರೂ.ಗಳನ್ನು ಸಾಲ ಪಡೆದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಆದರೆ, ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಲುವರಾಯಸ್ವಾಮಿ ಅವರು ತಮ್ಮ ಪ್ರಮಾಣ ಪತ್ರದಲ್ಲಿ ಝಮೀರ್ ಅವರಿಗೆ ಸಾಲ ನೀಡಿರುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.
ಇದನ್ನು ಗಮನಿಸಿದರೆ ಝಮೀರ್ ಅಹ್ಮದ್ ಖಾನ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.
ಆಯೋಗ ಕಾನೂನು ಕ್ರಮ ಜರುಗಿಸುವ ಜೊತೆಗೆ ಸುಳ್ಳು ಮಾಹಿತಿ ನೀಡಿರುವ ಝಮೀರ್ ಅಹ್ಮದ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಎನ್.ಆರ್.ರಮೇಶ್ ಒತ್ತಾಯ ಮಾಡಿದರು.