ಸರಕಾರಿ ಸುತ್ತೋಲೆ, ಕಡತಗಳ ಭಾಷಾಂತರ ಗುಣಮಟ್ಟ ಹೆಚ್ಚಿಸಬೇಕಾಗಿದೆ: ಇತಿಹಾಸ ತಜ್ಞ ಷ.ಶೆಟ್ಟರ್
ಬೆಂಗಳೂರು, ಆ.3: ಸರಕಾರಿ ಸುತ್ತೋಲೆ, ಕಡತಗಳಲ್ಲಿನ ಭಾಷಾಂತರ ಸರಿ ಇರುವುದಿಲ್ಲ. ಆದಷ್ಟು ಬೇಗ ಇದರ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಇತಿಹಾಸ ತಜ್ಞ ಷ.ಶೆಟ್ಟರ್ ಹೇಳಿದರು.
ಶನಿವಾರ ನಗರದ ಅರಮನೆ ರಸ್ತೆಯ ಜೈನ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಏರ್ಪಡಿಸಿದ್ದ, ದೇಶ ಭಾಷೆಗಳು ಮತ್ತು ಅನುವಾದದ ಅನುಸಂಧಾನ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರಕಾರಗಳು ಸುತ್ತೋಲೆ ಹೊರಡಿಸುತ್ತವೆ. ಆದರೆ, ಅದರಲ್ಲಿನ ಭಾಷಾಂತರ ಗುಣಮಟ್ಟ ಇರುವುದಿಲ್ಲ. ಅಷ್ಟೇ ಅಲ್ಲದೆ, ಅದರಲ್ಲಿನ ಮೂಲ ಅಂಶಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಜನರಿಗೆ ಅರ್ಥವೇ ಆಗುವುದಿಲ್ಲ ಎಂದು ತಿಳಿಸಿದರು.
ಭಾಷಾಂತರ ಮಾಡಿದ ಕೃತಿಗಳಲ್ಲಿ ನಮಗೆ ಮೂಲ ಭಾವನಾತ್ಮಕತೆ ದೊರೆಯಲು ಸಾಧ್ಯವಿಲ್ಲ. ಕೇವಲ ಮಾಹಿತಿ ಆಧಾರದಲ್ಲಿಟ್ಟುಕೊಳ್ಳಬಹುದು. ಅಲ್ಲದೆ, ಶಾಸ್ತ್ರೀಯ ಗ್ರಂಥಗಳನ್ನು, ಮಹಾಭಾರತ-ರಾಮಾಯಣ ಕಾವ್ಯವನ್ನು ಭಾಷಾಂತರ ಮಾಡಿದರೂ, ಅದರ ಮೂಲ ಓದುಗ ಆಗಲು ಸಾಧ್ಯವಿಲ್ಲ ಎಂದು ನುಡಿದರು.
ಭಾಷೆ ನಮ್ಮ ಯೋಚನೆಗಳನ್ನು ನಿಯಂತ್ರಿಸುತ್ತದೆ. ಯೋಚನೆಗಳ ಮಿತಿ ಭಾಷೆಯ ಮಿತಿ ಕೂಡ ಹೌದು. ಭಾಷಾಂತರ ಕೇವಲ ಪದಗಳ ಅರ್ಥೈಸುವಿಕೆ ಮಾತ್ರವಲ್ಲ, ಅದೊಂದು ಸಂಸ್ಕೃತಿ ಮತ್ತೊಂದು ಸಂಸ್ಕೃತಿಯ ಜತೆಗೆ ನಡೆಸುವ ಸಂವಾದ ಕೂಡ ಆಗಿರುತ್ತದೆ. ಆದ್ದರಿಂದ, ಭಾಷೆಯ ಸಂಸ್ಕೃತಿಯನ್ನು ಹಿಡಿಯದಿದ್ದರೆ ಭಾಷಾಂತರ ಸಾಧ್ಯವಿಲ್ಲ ಎಂದರು.
ಆಂಗ್ಲ ಭಾಷೆಯ ಕೆಲ ಪದಗಳನ್ನು ತಿದ್ದುಪಡಿ ಮಾಡುವ ಸಾಹಸವನ್ನು ಅಮೆರಿಕ ಮಾಡಿದೆ. ಅಷ್ಟೇ ಅಲ್ಲದೆ, ಹೊಸ ಸಾಹಿತ್ಯವನ್ನು ಹುಟ್ಟು ಹಾಕಿದೆ. ಆದರೆ, ಅಮೆರಿಕ ದೇಶಕ್ಕಿಂತ ನಾವು ಮೊದಲು ಆಂಗ್ಲವನ್ನು ಪರಿಚಯ ಮಾಡಿಕೊಂಡರೂ, ಯಾವುದೇ ಬದಲಾವಣೆಗೆ ಮುಂದಾಗಿಲ್ಲ. ಇಂಗ್ಲಿಷ್ ಶಿಕ್ಷಣದಲ್ಲೂ ಕ್ರಾಂತಿಕಾರಿ ಬದಲಾವಣೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಕನ್ನಡ ಪರಂಪರೆಯನ್ನು ಗಮನಿಸಿದರೆ ಸಂಸ್ಕೃತದಿಂದ ಕನ್ನಡಕ್ಕೆ ಅನೇಕ ಕೃತಿಗಳು ಅನುವಾದಗೊಂಡಿವೆ. ಆದರೆ, ಕನ್ನಡದಿಂದ ಸಂಸ್ಕೃತಕ್ಕೆ ಎಷ್ಟು ಕೃತಿಗಳು ಅನುವಾದಗೊಂಡಿವೆ. ಏಕೆ ಅನುವಾದಗೊಂಡಿಲ್ಲ ಎಂದು ಪ್ರಶ್ನಿಸಿದರು.
ಜಾಗತಿಕ ನೆಲೆಯಲ್ಲಿ ಸಲ್ಲಬಹುದಾದ ಅನೇಕ ಸಿದ್ಧಾಂತಗಳು ನಮ್ಮಲ್ಲಿ ಇವೆ. ನಾವು ಬೇರೆಯವರು ಕೊಟ್ಟಿದ್ದನ್ನು ಸ್ವೀಕರಿಸುತ್ತಿದ್ದೇವೆ. ಈಗ ನಾವು ಕೊಡುತ್ತಿದ್ದೇವೆ, ನೀವು ಸ್ವೀಕರಿಸಿ ಎಂದು ಹೇಳುವ ವಿಶ್ವಾಸವನ್ನು ಸ್ಥಳೀಯ ದೇಶಭಾಷೆಗಳು ಪಡೆದುಕೊಳ್ಳಬೇಕಾಗಿದೆ. ಇದು ಸಾಂಸ್ಕೃತಿಕವಾಗಿ ಬಹಳ ಮುಖ್ಯವಾದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಜೈನ್ ವಿವಿಯ ಉಪಕುಲಪತಿ ಡಾ.ಸಂದೀಪ ಶಾಸ್ತ್ರಿ ಸೇರಿದಂತೆ ಪ್ರಮುಖರಿದ್ದರು.







